ನ್ಯೂಸ್ ನಾಟೌಟ್: ಸ್ನೇಹಕ್ಕೆ ಎಂದೂ ಬೆಲೆ ಕಟ್ಟಲಾಗುವುದಿಲ್ಲ. ಸ್ನೇಹ ಅಜರಾಮರ. ಕಷ್ಟಕಾಲದಲ್ಲಿ ನೆಂಟರು- ಬಂಧು ಬಳಗದವರು ಸಹಾಯಕ್ಕೆ ನಿಲ್ಲದೆ ಇರಬಹುದು, ಆದರೆ ಒಳ್ಳೆಯ ಸ್ನೇಹಿತ ಸದಾ ಜತೆಗಿರುತ್ತಾನೆ. ಇಂತಹ ಒಂದು ಬಲವಾದ ನಂಬಿಕೆಯೇ ಬರೋಬ್ಬರಿ 25 ವರ್ಷಗಳ ಬಳಿಕ ವಿದ್ಯಾರ್ಥಿಗಳ ‘ಗೆಟ್ ಟು ಗೆದರ್’ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದೆ.
ಹೌದು, ಮಂಗಳೂರು ವಿಶ್ವ ವಿದ್ಯಾನಿಲಯದ 1998-99 ಬ್ಯಾಚ್ ನ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಸುಮಧುರ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಇತ್ತೀಚೆಗೆ ನಡೆದ ಈ ಕಾರ್ಯಕ್ರಮ ಹಿಂದಿನ ಸವಿ ನೆನಪುಗಳ ಬುತ್ತಿಯನ್ನು ಬಿಚ್ಚುವ ಮೂಲಕ ಸಂಪನ್ನವಾಯಿತು. ಮಾತು, ಹರಟೆ , ಊಟದ ಜೊತೆಗೆ ಸಿಹಿ ನೆನಪುಗಳು ಹೋಳಿಗೆಯಾಯಿತು. ಆಗಸ್ಟ್ 13ರಂದು ಮಂಗಳೂರಿನ ಬಲ್ಲಾಳ್ ಭಾಗ್ ಪತ್ತು ಮುಡಿ ಸಭಾಂಗಣದಲ್ಲಿ ಈ ಅಪೂರ್ವ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೇಂದ್ರ ಮಂಗಳೂರು ವಿಶ್ವವಿದ್ಯಾಲಯದ ನಿರ್ದೇಶಕ ಡಾ. ರವಿಶಂಕರ್ ಮುಖ್ಯ ಅತಿಥಿಯಾಗಿ ದೀಪ ಬೆಳಗಿಸಿದರು. 25 ವರ್ಷಗಳ ನಂತರ ಪ್ರಥಮ ಬಾರಿಗೆ ಎಲ್ಲರೂ ಒಟ್ಟಿಗೆ ಸೇರಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ನಿವೃತ್ತ ಸಹಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ ಮತ್ತು ನಿರ್ದೇಶಕರು ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಡಾ. ಅನಿತಾ ರವಿಶಂಕರ್ , ಕೆಎಂಸಿ ಮಂಗಳೂರು ಶಸ್ತ್ರಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ. ಶಿವಾನಂದ ಪ್ರಭು, ಮಮತಾ ಶಿವಾನಂದ ಪ್ರಭು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಚಂದ್ರಕುಮಾರ್ ಕುತ್ಯಾಳ, ಮಂಗಳೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್ , ಸೇಂಟ್ ಜಾರ್ಜ್ ಪಿ.ಯು ಕಾಲೇಜು ನೆಲ್ಯಾಡಿ ಉಪನ್ಯಾಸಕ ಮಧು ಎ. ಜೆ, 1998-1999 ಸಮಾಜಶಾಸ್ತ್ರ ಬ್ಯಾಚಿನ ವಿದ್ಯಾರ್ಥಿಗಳು ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.