ನ್ಯೂಸ್ ನಾಟೌಟ್: ಪಾರ್ಟಿ ಮಾಡಲು ಪಬ್ ಗೆ ಕರೆಸಿ, ಸುಪಾರಿ ನೀಡಿ ಗೆಳೆಯನನ್ನೇ ಸುಲಿಗೆ ಮಾಡಿಸಿರುವ ಘಟನೆಯೊಂದು ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದನ್ ಸುಲಿಗೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಚಂದನ್ ಗೆ ಪವನ್ ಮತ್ತು ಅಚಲ್ ಎಂಬ ಇಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚೆನ್ನಾಗಿದ್ದ ಎನ್ನುವುದು ಇವರಿಗೆ ತಿಳಿದಿತ್ತು. ಕಳೆದ ಮೇ 1ರಂದು ಚಂದನ್ ಗೆ ಇಬ್ಬರು ಸ್ನೇಹಿತರು ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್ ಗೆ ಬರಲು ಹೇಳಿದ್ದರು. ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಸೇರಿ ಪಾರ್ಟಿ ಮಾಡಿದ್ದರು.
ನಂತರ ಜಾಲಿ ರೈಡ್ ಹೋಗೋಣ ಎಂದು ಚಂದನ್ ಕಾರಿನಲ್ಲೇ ಏರ್ ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ 3 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು.
ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಎಂದು ಚಂದನ್ ಮನವೊಲಿಸಿದ್ದರು ಎನ್ನಲಾಗಿದೆ. ಇದಾದ 1 ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ.
ಪೊಲೀಸ್ ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಪಾರಿ ನೀಡಿ, ಸುಲಿಗೆ ಮಾಡಿಸಿರುವುದು ಗೊತ್ತಾಗಿದೆ. ಸದ್ಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.
ಮಂಗಳೂರು: ನೆರೆ ಸಂತ್ರಸ್ತರಿಗೆ ಕದ್ರಿ ದೇಗುಲದಲ್ಲಿ ಊಟದ ವ್ಯವಸ್ಥೆ, ಇಲ್ಲಿದೆ ಸಂಪರ್ಕ ಸಂಖ್ಯೆ