ನ್ಯೂಸ್ ನಾಟೌಟ್: ರೈಲ್ವೆ ಇಲಾಖೆ ಒಟ್ಟು 13,452 ರೈಲುಗಳನ್ನು ನಿಯೋಜಿಸಿದೆ, ಈ ಸಾವಿರಾರು ರೈಲುಗಳಲ್ಲಿ ಕೇವಲ ಒಂದು ರೈಲು ಮಾತ್ರ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ. ಈ ರೈಲು ಪ್ರಯಾಣದ ಆನಂದವನ್ನು ನೀಡುವುದಲ್ಲದೆ, ದಾರಿಯುದ್ದಕ್ಕೂ ಉಚಿತ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸಹ ಒದಗಿಸುತ್ತದೆ.
ಈ ವಿಶೇಷ ರೈಲು ದೇಶದ ಎರಡು ಪ್ರಸಿದ್ಧ ಧಾರ್ಮಿಕ ಸ್ಥಳಗಳ ನಡುವೆ ಚಲಿಸುತ್ತದೆ ಮತ್ತು ಭಕ್ತರಿಗೆ ದರ್ಶನದ ಅವಕಾಶವನ್ನು ಕಲ್ಪಿಸುತ್ತದೆ. ಆದರಂತೆ, ಕಳೆದ 29 ವರ್ಷಗಳಿಂದ ಈ ರೈಲಿನ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತಿದೆ. ಭಾರತೀಯ ರೈಲ್ವೆಯ ಇತರ ರೈಲುಗಳಲ್ಲಿ ಆಹಾರ ಸೌಲಭ್ಯವಿದ್ದರೂ, ಅದಕ್ಕೆ ಪಾವತಿ ಮಾಡಬೇಕಾಗುತ್ತದೆ. ಆದರೆ, ಈ ರೈಲು ಯಾವುದೇ ಶುಲ್ಕವಿಲ್ಲದೆ ಉಪಹಾರ ಮತ್ತು ಭೋಜನವನ್ನು ಉಚಿತವಾಗಿ ಒದಗಿಸುವ ಏಕೈಕ ರೈಲು ಸೇವೆಯಾಗಿದೆ.
ಸಚ್ಖಂಡ್ ಎಕ್ಸ್ ಪ್ರೆಸ್ (12715) ರೈಲು ಇದಾಗಿದ್ದು, ಮಹಾರಾಷ್ಟ್ರದ ನಾಂದೇಡ್ ನಗರದಿಂದ ಪಂಜಾಬ್ ನ ಅಮೃತಸರ ನಗರಕ್ಕೆ ಸಂಚರಿಸುತ್ತದೆ. ಈ ರೈಲು ಅಮೃತಸರದ ಪ್ರಮುಖ ಧಾರ್ಮಿಕ ಸ್ಥಳವಾದ ಶ್ರೀ ಹರ್ಮಂದರ್ ಸಾಹಿಬ್ ಗುರುದ್ವಾರ ದಿಂದ ಹೊರಟು, ನಾಂದೇಡ್ ನ ಶ್ರೀ ಹಜೂರ್ ಸಾಹಿಬ್ ಗುರುದ್ವಾರಕ್ಕೆ ತಲುಪುತ್ತದೆ. ಈ ರೈಲು ಈ ಎರಡು ಪವಿತ್ರ ಸ್ಥಳಗಳ ನಡುವಿನ ಸಂಪರ್ಕವನ್ನು ಒದಗಿಸುತ್ತದೆ.
ಸಚ್ಖಂಡ್ ಎಕ್ಸ್ ಪ್ರೆಸ್ ರೈಲು ಸುಮಾರು 2,000 ಕಿ.ಮೀ ದೂರವನ್ನು ಕ್ರಮಿಸುತ್ತದೆ ಮತ್ತು ಈ ಸಮಯದಲ್ಲಿ 39 ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತದೆ. ಪ್ರಯಾಣದ ಸಮಯದಲ್ಲಿ 6 ನಿಲ್ದಾಣಗಳಲ್ಲಿ ಲಂಗಾರ್ ಆಯೋಜಿಸಲಾಗುತ್ತದೆ, ಅಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರವನ್ನು ಒದಗಿಸಲಾಗುತ್ತದೆ. ಈ ನಿಲ್ದಾಣಗಳು: ಹೊಸ ದೆಹಲಿ, ಭೋಪಾಲ್, ಪರ್ಭಾನಿ, ಜಲ್ನಾ, ಔರಂಗಾಬಾದ್, ಮರಾಠವಾಡ. ಮುಂದುವರೆದು, ಈ ಪ್ರಯಾಣವನ್ನು ಪೂರ್ಣಗೊಳಿಸಲು ರೈಲು ಸುಮಾರು 33 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ರೈಲಿನ ನಿಲುಗಡೆಗಳನ್ನು ಪ್ರಯಾಣಿಕರು ಆರಾಮವಾಗಿ ಆಹಾರವನ್ನು ಸೇವಿಸುವಂತೆ ಯೋಜಿಸಲಾಗಿದೆ. ಆದರಂತೆ, ನಿಲ್ದಾಣಕ್ಕೆ ತಕ್ಕಂತೆ ರೈಲಿನ ಉಚಿತ ಆಹಾರದ ಮೆನು ಸಹ ಸತತವಾಗಿ ಬದಲಾಗುತ್ತಿರುತ್ತದೆ, ಆದರೆ ಸಾಮಾನ್ಯವಾಗಿ ಅನ್ನ-ಸಾಂಬಾರ್, ಚೋಲೆ, ದಾಲ್, ಖಿಚಡಿ, ಪಲ್ಯವಾಗಿರುತ್ತದೆ.
ಇನ್ನು ರೈಲಿನಲ್ಲಿ ಒದಗಿಸಲಾಗುವ ಈ ಉಚಿತ ಆಹಾರ ಯೋಜನೆಯ ವೆಚ್ಚವನ್ನು ಗುರುದ್ವಾರಗಳಿಗೆ ಬರುವ ದೇಣಿಗೆಗಳಿಂದ ಭರಿಸಲಾಗುತ್ತದೆ.