ನ್ಯೂಸ್ ನಾಟೌಟ್: ಅಡಿಕೆ ಕದ್ದರೂ ಕಳ್ಳ..ಆನೆ ಕದ್ದರೂ ಕಳ್ಳ ಎಂಬ ಮಾತೊಂದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಜನಿತವಾಗಿದೆ. ಅಂತೆಯೇ ಇಲ್ಲೊಂದು ಕಡೆ ಸಣ್ಣ ಕಳ್ಳನಿಗೆ ದೊಡ್ಡ ಶಿಕ್ಷೆಯನ್ನು ಹಾಗೂ ದೊಡ್ಡ ಕಳ್ಳನಿಗೆ ಸಣ್ಣ ಪ್ರಮಾಣದ ಶಿಕ್ಷೆಯನ್ನು ನೀಡಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಆಗುತ್ತಿದೆ. ಇದು ವೈರಲ್ ಆಗುತ್ತಿದೆ.
ಹೌದು, ಇತ್ತೀಚೆಗೆ ಉಡುಪಿಯ ಬೈಂದೂರಿನಲ್ಲಿ ಲೈನ್ಮ್ಯಾನ್ ಒಬ್ಬ ಮಹಿಳೆಯಿಂದ 2 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ಆತನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ಆದಾಯ ಮೀರಿ ಆಸ್ತಿ ಸಂಪಾದಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪುತ್ತೂರು ಮೂಲಕ ತಹಶೀಲ್ದಾರ್ ಅಜಿತ್ ಕುಮಾರ್ ರೈಗೆ ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರ ಸಣ್ಣ ಕಳ್ಳನಿಗೆ ಬಂಧನದಂತಹ ಕಠಿಣ ಶಿಕ್ಷೆಯನ್ನು ನೀಡಿದೆ. ಆದರೆ ದೊಡ್ಡ ಕಳ್ಳನಿಗೆ ವರ್ಗಾವಣೆಯನ್ನಷ್ಟೇ ಮಾಡಿರುವುದು ಏಕೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ದರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಡಲಾಗಿತ್ತು. ಆದರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾಯಿಸಲಾಗಿದೆ.