ನ್ಯೂಸ್ ನಾಟೌಟ್: ವಿಶೇಷ ಸಿಬಿಐ ನ್ಯಾಯಾಲಯವು ಪಕ್ಷೇತರ ಶಾಸಕ ಹಾಗೂ ಬಿಜೆಪಿ ಬೆಂಬಲಿತ ಜನಾರ್ದನ ರೆಡ್ಡಿಯನ್ನು ಅಕ್ರಮ ಗಣಿಗಾರಿಕೆಯಲ್ಲಿ ಅಪರಾಧಿ ಎಂದು 7 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದ ಬೆನ್ನಲ್ಲೇ, ಸ್ಪೀಕರ್ ಯು.ಟಿ.ಖಾದರ್ ಶಾಸಕ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಈ ಸಂಬಂಧ ಗುರುವಾರ(ಮೇ.8) ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷೀ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಮೇ 6ರಂದು ಹೈದ್ರಾಬಾದ್ ನ ವಿಶೇಷ ಸಿಬಿಐ ನ್ಯಾಯಾಲಯವು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತೊಡಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತೀರ್ಪು ನೀಡಿದೆ. ಹೀಗಾಗಿ ಭಾರತ ಸಂವಿಧಾನದ 191(1)(ಇ) ವಿಧಿಯ ನಿಬಂಧನೆಗಳ ಪ್ರಕಾರ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಯನ್ನು ಅನರ್ಹಗೊಳಿಸಲಾಗಿದೆ ಎಂದಿದ್ದಾರೆ.
ನ್ಯಾಯಾಲಯವು ಶಿಕ್ಷೆಯನ್ನು ತಡೆಹಿಡಿಯದ ಹೊರತು ಶಾಸಕ ಜನಾರ್ದನ ರೆಡ್ಡಿಯ ಅನರ್ಹತೆಯು ಮುಂದಿನ ಆರು ವರ್ಷಗಳ ಅವಧಿಯವರೆಗೆ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಒಂದು ಸ್ಥಾನ ಖಾಲಿಯಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.