ನ್ಯೂಸ್ ನಾಟೌಟ್ : ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲೇ ನಿಲ್ಲಿಸಿದ್ದ ಸಾರಿಗೆ ಬಸ್ ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ದತ್ತಾತ್ರಯ ರಾಮದಾಸ್ ಗಡೆ ತನ್ನ ಊರಿನ ವಿಶಾಲವಾದ ಕಬ್ಬಿನ ಗದ್ದೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ವಿಶಾಲವಾದ ಪ್ರದೇಶದಲ್ಲಿ ಸುಮಾರು 10 ಅಡಿ ಎತ್ತರದಲ್ಲಿ ಬೆಳೆದ ಕಬ್ಬಿನ ಗದ್ದೆಯಲ್ಲಿ ಆರೋಪಿ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ಪತ್ತೆ ಮಾಡಲು ಪೊಲೀಸರು ದ್ರೋನ್ (Drone) ಹಾಗೂ ಸ್ನಿಫರ್ ಡಾಗ್ ಬಳಸುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಕೃಷಿ ಪ್ರದೇಶದಲ್ಲಿ ಹುಡುಕುವುದು ಕಷ್ಟಕರವಾಗಿದೆ. ಅದಕ್ಕಾಗಿ ಡ್ರೋಣ್ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ತರಕಾರಿಗಳನ್ನು ಸಾಗಿಸುತ್ತಿದ್ದ ಟ್ರಕ್ ನಲ್ಲಿ ಅಡಗಿಕೊಂಡು ತನ್ನ ಊರಿಗೆ ತಲುಪಿದ್ದಾನೆ. ಅಲ್ಲಿ ಅವನು ತನ್ನ ಬಟ್ಟೆ ಮತ್ತು ಬೂಟುಗಳನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಅವನನ್ನು ಪತ್ತೆಹಚ್ಚಲು ಅಪರಾಧ ವಿಭಾಗದ 8 ಮಂದಿ ಪೊಲೀಸರು ಸೇರಿದಂತೆ 13 ವಿಶೇಷ ತಂಡಗಳನ್ನು ರಚಿಸಲಾಗಿದೆ. ಆತನ ಕುಟುಂಬದ ಸದಸ್ಯರು ಮತ್ತು ಪರಿಚಿತರನ್ನು ವಿಚಾರಿಸಲಾಗಿದೆ. ಆತನ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 5:45 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಅತ್ಯಾಚಾರ ನಡೆದಿದೆ.