ನ್ಯೂಸ್ ನಾಟೌಟ್: ಆಗಾಗ ವಿದ್ಯುತ್ ಕಡಿತಗೊಳ್ಳುವುದರಿಂದ ಬೇಸತ್ತ ಗ್ರಾಮಸ್ಥರು, ಬಳಿಕ ಊರಿಗೆ ಅಳವಡಿಸಿದ ವಿದ್ಯುತ್ ಪರಿವರ್ತಕ(ಟ್ರಾನ್ಸ್ಫಾರ್ಮರ್)ಕ್ಕೆ ಪೂಜೆ ಸಲ್ಲಿಸಿ, ಹಬ್ಬದಂತೆ ಸಂಭ್ರಮಿಸಿದ್ದಾರೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗಾಂಧಿ ನಗರ ಪ್ರದೇಶದಲ್ಲಿ ಕಳೆದ ಕೆಲ ಸಮಯದಿಂದ ವಿದ್ಯುತ್ ವ್ಯತ್ಯಯದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಈ ಪ್ರದೇಶದಲ್ಲಿ ಹಿಂದಿನ ಟ್ರಾನ್ಸ್ ಫಾರ್ಮರ್ ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕೆಟ್ಟುಹೋಗಿತ್ತು. ಪರಿಣಾಮ ಗ್ರಾಮದಲ್ಲಿ ಹಿಂದಿಗಿಂತಲೂ ಹೆಚ್ಚು ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿತ್ತು.
ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಮಸ್ಥರು, ಈ ಸಮಸ್ಯೆಯನ್ನು ಸ್ಥಳೀಯ ಶಾಸಕ ನರೇಂದ್ರ ಸಿಂಗ್ ಕುಶ್ವಾಹ ಹೇಳಿದ್ದರು. ಇದಾದ ನಂತರ ಊರಿಗೆ ಹೊಸ ಟ್ರಾನ್ಸ್ ಫಾರ್ಮರ್ ನ್ನು ಹಾಕಲಾಗಿದೆ.
ವಿದ್ಯುತ್ ಇಲಾಖೆಯ ತ್ವರಿತ ಪ್ರತಿಕ್ರಿಯೆಗೆ ಕೃತಜ್ಞರಾಗಿ, ಸ್ಥಳೀಯರು ಒಟ್ಟಾಗಿ ಇದನ್ನು ಸಂಭ್ರಮಿಸಿದ್ದಾರೆ. ಟ್ರಾನ್ಸ್ಫಾರ್ಮರ್ ದೀರ್ಘಕಾಲ ಬಾಳಿಕೆ ಬರಲಿ ಎಂದು ಆಶಿಸಿ, ಅದಕ್ಕೆ ಪೂಜೆ ಮಾಡಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.