ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಘಟನೆ ನಡೆದಿದ್ದು, ಆರತಕ್ಷತೆಗೆ ಇನ್ನೇನು ಕೆಲವೇ ಕ್ಷಣ ಬಾಕಿ ಇದೆ ಎನ್ನುವಷ್ಟರಲ್ಲಿ ವಧು 10 ಲಕ್ಷ ರೂ. ಮೌಲ್ಯದ ಆಭರಣದೊಂದಿಗೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಫೆಬ್ರವರಿ 18 ರಂದು ವರ ಆಶಿಶ್ ರೋಶ್ನಿ ಎಂಬ ಯುವತಿಯ ಜೊತೆ ಮದುವೆಯಾದನು. ಮರುದಿನ ಅಂದ್ರೆ ಫೆಬ್ರವರಿ 19 ರಂದು ಇವರಿಬ್ಬರ ಆರತಕ್ಷತೆ ನಿಗದಿಯಾಗಿತ್ತು. ಆದರೆ ಆ ದಿನ ಮದುಮಗಳು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಆರತಕ್ಷತೆಯ ದಿನದಂದು ಆಶಿಶ್ ಮತ್ತು ರೋಶ್ನಿ ತಯಾರಾಗಲು ಹತ್ತಿರದ ಬ್ಯೂಟಿ ಪಾರ್ಲರ್ ಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಮಂಟಪಕ್ಕೆ ಕಾರಿನಲ್ಲಿ ತೆರಳಿದರು. ಇವರು ಮಂಟಪ ತಲುಪುವಷ್ಟರಲ್ಲಿ ಅಲ್ಲಿಗೆ ಇನ್ನೊಂದು ಕಾರು ಬಂದಿದ್ದು, ವರ ಆಶೀಕ್ ನ ಸಹೋದರಿಯನ್ನು ತಳ್ಳಿ ಯುವಕನೊಬ್ಬ ವಧುವನ್ನು ಕಾರಿನಲ್ಲಿ ಕೂರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಮೊದಲಿಗೆ ಇದೊಂದು ಅಪಹರಣ ಪ್ರಕರಣವೆಂದು ನಂಬಿದ್ದರು.
ನಂತರದಲ್ಲಿ ವಧು ಇಷ್ಟಪಟ್ಟೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂಬುದು ತಿಳಿದು ಬಂದಿದೆ. ವಧು ರೋಶ್ನಿ ಮತ್ತು ಅಂಕಿತ್ ಎಂಬ ಯುವಕ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಮನೆಯವರ ವಿರೋಧವಿತ್ತು. ಅಷ್ಟೇ ಅಲ್ಲದೆ ಆಕೆ ಮನೆಯವರು ಮಗಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದರು. ನಂತರ ಆರತಕ್ಷತೆಯ ದಿನ ಈ ಇಬ್ಬರು ಪ್ರೇಮಿಗಳು ಓಡಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ರೋಶ್ನಿ ಮತ್ತು ಅಂಕಿತ್ ನನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.