ನ್ಯೂಸ್ ನಾಟೌಟ್: ಧರ್ಮಸ್ಥಳ ಪ್ರಕರಣದಲ್ಲಿ ‘ದೂರು ಸಾಕ್ಷಿದಾರನಿಗೆ ಮಾಸ್ಕ್ ಹಾಕಿಸಿದ್ದೇ ಸರ್ಕಾರ. ಸಿಎಂ ಸಿದ್ದರಾಮಯ್ಯ ಅವರಿಗೆ ನಿಕಟರಾದ ಪ್ರಗತಿಪರರು ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರ ಬಂದ ಕೂಡಲೇ ಪ್ರಗತಿಪರರು ನಾಪತ್ತೆಯಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದ್ದಾರೆ.
ಧರ್ಮಸ್ಥಳ ವಿಚಾರದಲ್ಲಿ ಲವ್ ಜಿಹಾದ್ ಮಾದರಿಯ ಮತಾಂತರ ಜಿಹಾದ್ ಇದ್ದಂತಿದೆ. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ. ಹಿಂದೂ ದೇವಾಲಯಗಳೇ ಇವರ ಗುರಿ. ಚರ್ಚ್, ಮಸೀದಿ ಕಡೆ ಇವರು ಹೋಗುವುದಿಲ್ಲ. ಇದರ ಹಿಂದೆ ದೊಡ್ಡ ಪಡೆಯೇ ಇದೆ. ಮಾಸ್ಕ್ ಮ್ಯಾನ್, ಸುಜಾತಾ ಭಟ್ ಇವರೆಲ್ಲ ಇದರ ಪಾತ್ರಧಾರಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎಸ್ಐಟಿಗೆ ಸರ್ಕಾರ ಎರಡರಿಂದ ಮೂರು ಕೋಟಿ ರೂ. ಖರ್ಚು ಮಾಡಿದೆ. ಯಾವನೋ ಒಬ್ಬ ದಾರಿಯಲ್ಲಿ ಹೋಗುವವನ ಮಾತು ಕೇಳಿ ಎಸ್ಐಟಿ ರಚನೆ ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಮುಸುಕು ತೆಗೆಯಿರಿ ಎಂದು ನಾನು ಎರಡು ಬಾರಿ ಹೇಳಿದ್ದೆ. ಅಂದೇ ಅವನ ಮುಸುಕು ತೆಗೆಸಿದ್ದರೆ ಅವನು ಎಂತಾ ಕಳ್ಳ ಎಂಬುದು ಗೊತ್ತಾಗುತ್ತಿತ್ತು. ಅವನೊಬ್ಬ ಮತಾಂತರಿ ಎಂದು ಗೊತ್ತಾಗಿದೆ. ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ’ ಎಂದು ಅವರು ಹೇಳಿದರು.
‘ಆರ್ಎಸ್ಎಸ್ ಇರದಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು. ಈಗಾಗಲೇ ಎರಡು ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಆರ್ಎಸ್ಎಸ್ಗೆ ದೇಶಭಕ್ತಿ ಇದೆ, ಹೀಗಾಗಿ ಭಾರತವು ಉಳಿದುಕೊಂಡಿದೆ. ಡಿ.ಕೆ.ಶಿವಕುಮಾರ್ ಅವರಿಗೆ ದೇಶ ಭಕ್ತಿ ಇರುವುದರಿಂದಲೇ ಆರ್ಎಸ್ಎಸ್ ಗೀತೆಯನ್ನು ಅವರು ಹೇಳಿದ್ದಾರೆ’ ಎಂದು ಅಶೋಕ ಅಭಿಪ್ರಾಯಪಟ್ಟಿದ್ದಾರೆ.