ನ್ಯೂಸ್ ನಾಟೌಟ್: ಜಗತ್ತಿನಲ್ಲಿ ತನ್ನವರು ಅನ್ನುವವರು ಯಾರೂ ಇಲ್ಲದ ಜೀವಗಳು ಎಷ್ಟೋ ಇವೆ. ಆ ಜೀವಗಳನ್ನು ನೆನಪಿಸಿಕೊಂಡು ಅವರಿಗೆ ನಾವಿದ್ದೇವೆ ಎಂದು ಬೆನ್ನುತ್ತಟ್ಟುವವರು ಅಪರೂಪ. ಆದರೆ ದೇವರು ಅಂತಹ ವಿದ್ಯಾರ್ಥಿಗಳಿಗೂ ಬೆಂಬಲ ಸೂಚಿಸುವ ವ್ಯಕ್ತಿಗಳನ್ನು ಭೂಮಿ ಮೇಲೆ ಸೃಷ್ಟಿಸಿದ್ದಾನೆ ಎನ್ನುವುದಕ್ಕೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಪ್ರತ್ಯಕ್ಷ ಉದಾಹರಣೆಯಾಗಿದೆ.
ರಾಕೇಶ್ ಎಂಬ ಬಾಲಕನೊಬ್ಬ ತನ್ನ ತಂದೆ-ತಾಯಿಯನ್ನು ಕಳೆದುಕೊಂಡು ಇದೀಗ ಅಜ್ಜಿಯ ಜೊತೆ ವಾಸವಾಗಿದ್ದಾನೆ. ಮನೆಯಲ್ಲಿ ತುಂಬಾ ಬಡತನವಿದೆ. ಬಡತನದ ನಡುವೆಯೂ ಅಜ್ಜಿ ಆತನನ್ನು ಕಷ್ಟದಿಂದ ಅಡ್ಪಂಗಾಯದ ಶಾಲೆಗೆ ಕಳುಹಿಸುತ್ತಿದ್ದಾರೆ. ಈ ನಡುವೆ ಬಾಲಕನ ಕಷ್ಟವನ್ನು ಕಂಡು ಮರುಗಿರುವ ಖ್ಯಾತ ಸಿನಿಮಾ ನಟ ದರ್ಶನ್ ಅಭಿಮಾನಿಗಳು ಈಗ ಸಹಾಯಕ್ಕೆ ಮುಂದೆ ಬಂದಿರುವುದು ವಿಶೇಷ. ಬಾಲಕನನ್ನು ಭೇಟಿಯಾಗಿ ಆತನಿಗೆ ಅಗತ್ಯವಾಗಿ ಬೇಕಿದ್ದ ಪುಸ್ತಕ- ಬ್ಯಾಗ್- ಕೊಡೆ- ಚಪ್ಪಲ್ ನೀಡಿ ಆತನ ಶಿಕ್ಷಣಕ್ಕೆ ಬೆಂಬಲವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿನಿಮಾ ನಟರಿಗೆ ಅಭಿಮಾನಿಗಳಿರುವುದು ಕಡಿಮೆ, ಆದರೆ ಸುಳ್ಯದಲ್ಲಿ ಡಿ ಬಾಸ್ ಅಭಿಮಾನಿಗಳು ವಿದ್ಯಾರ್ಥಿಯೊಬ್ಬನ ಬದುಕಿಗೆ ನೆರವಾಗಿರುವುದು ಅಚ್ಚರಿ ಮೂಡಿಸಿದೆ. ಜಗ್ಗೇಶ್ ಸಂಕೇಶ.. ಸತೀಶ್ ಅಡ್ಕಾರ್, ಮೋಕ್ಷಿತ್ ನೆಟ್ಟಾರು, ಧನುಷ್ ಪಂಜ, ಲೋಹಿತ್ ನಡುಗಲ್, ಗಣೇಶ್ ಬಂಬಿಲ ಹಾಗೂ ಸುಳ್ಯ ದ ದರ್ಶನ್ ಅಭಿಮಾನಿಗಳು ವಿದ್ಯಾರ್ಥಿಯ ಬೆಂಬಲಕ್ಕೆ ನಿಂತವರಾಗಿದ್ದಾರೆ.