ನ್ಯೂಸ್ ನಾಟೌಟ್: ಬಾಲಿವುಡ್ ನಟ ಸೈಫ್ ಆಲಿ ಖಾನ್ ಗೆ ಇರಿತ ಪ್ರಕರಣಕ್ಕೆ ಇದೀಗ ಭಾರೀ ದೊಡ್ಡ ತಿರುವು ಸಿಗುವ ಸಾಧ್ಯತೆಗಳಿವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಇನ್ನುವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ. ಇದೀಗ ಈ ಪ್ರಕರಣದ ತನಿಖೆ ನಡೆಸಲು ಉಡುಪಿ ಮೂಲದ ಸೂಪರ್ ಕಾಪ್ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದುಕೊಂಡಿರುವ ದಯಾನಾಯಕ್ ಅವರು ಎಂಟ್ರಿ ಪಡೆದುಕೊಂಡಿದ್ದಾರೆ. ಈ ತನಿಖೆಯ ಜವಾಬ್ದಾರಿಯನ್ನು ಅವರ ಹೆಗಲಿಗೆ ವಹಿಸಲಾಗಿದ್ದು ಪ್ರಕರಣದ ಭೇದಿಸುವ ನಿರೀಕ್ಷೆ ಗರಿಗೆದರಿದೆ.
ಮುಂಬೈ ಭೂಗತ ಲೋಕವನ್ನು ಯಮನಂತೆ ಕಾಡುತ್ತಿರುವ ಎನ್ಕೌಂಟರ್ ದಯಾನಾಯಕ್ ಅವರು ಸೈಫ್ ಅಲಿ ಖಾನ್ ಪ್ರಕರಣಕ್ಕೆ ಎಂಟ್ರಿ ನೀಡಿದ್ದಾರೆ. ಎನ್ಕೌಂಟರ್ ದಯಾನಾಯಕ್ ಅವರು ಇಂದು (ಜನವರಿ 17) ಸೈಫ್ ಅಲಿ ಖಾನ್ ಅನ್ನು ದಾಖಲು ಮಾಡಿರುವ ಲೀಲಾವತಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮುಂಚೆ ಅವರು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಮನೆಗೂ ಭೇಟಿ ನೀಡಿದ್ದರು. ಅಲ್ಲಿಯೂ ಸಹ ತನಿಖೆಯಲ್ಲಿ ಪಾಲ್ಗೊಂಡಿದ್ದರು. ಸೈಫ್ ಅಲಿ ಖಾನ್ ಪ್ರಕರಣದ ತನಿಖೆಗೆ ಮಾಡಲಾಗಿರುವ ಏಳು ತಂಡಗಳಲ್ಲಿ ಒಂದು ತಂಡದ ಜವಾಬ್ದಾರಿ ಎನ್ಕೌಂಟರ್ ದಯಾನಾಯಕ್ ಅವರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದಯಾನಾಯಾಕ್ ಖಡಕ್ ಆಫೀಸರ್ ಆಗಿ ಕೆಲಸ ಮಾಡಿದವರು. ಕರ್ನಾಟಕದ ಉಡುಪಿಯವರಾದ ದಯಾನಾಯಕ್ ಸಣ್ಣ ವಯಸ್ಸಿನಲ್ಲೇ ಮುಂಬೈಗೆ ಹೋಗಿ ಅಲ್ಲಿ ಕೆಲಸ ಮಾಡಲು ಆರಂಭಿಸಿದರು. ಒಮ್ಮೆ ಪೊಲೀಸ್ ಠಾಣೆಯಲ್ಲಿ ಪ್ಲಂಬಿಂಗ್ ಕೆಲಸ ಮಾಡುವಾಗ ಅವರಿಂದ ಸ್ಪೂರ್ತಿ ಪಡೆದು ಪೊಲೀಸ್ ಅಧಿಕಾರಿ ಆಗುವ ಕನಸು ಕಂಡಿದ್ದರು. ಚೆನ್ನಾಗಿ ಓದಿ, ಇನ್ಸ್ಪೆಕ್ಟರ್ ಆದ ದಯಾನಾಯಕ್, ಆ ನಂತರ ಭೂಗತ ಪಾತಕಿಗಳಿಗೆ ದುಃಸ್ವಪ್ನವಾಗಿ ಕಾಡಲು ಆರಂಭಿಸಿದರು. ಚೋಟಾ ರಾಜನ್, ಚೋಟಾ ಶಕೀಲ್ ಇನ್ನಿತರೆ ಕೆಲವು ಪಾತಕಿಗಳ ಕಡೆಯವರನ್ನು ಸಿಕ್ಕ-ಸಿಕ್ಕಲ್ಲಿ ಕೊಂದು ಸುದ್ದಿಯಾದರು. ಆದರೆ ಅವರ ವಿರುದ್ಧವೂ ಕೆಲ ಪ್ರಕರಣಗಳು ಜಾರಿಯಲ್ಲಿದ್ದು, ಒಮ್ಮೆ ಬಂಧನಕ್ಕೂ ಒಳಗಾಗಿದ್ದರು.
ಸೈಫ್ ಅಲಿ ಖಾನ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಎದ್ದಿದ್ದು, ಸೈಫ್ ಅಲಿ ಖಾನ್ಗೆ ಚಾಕು ಚುಚ್ಚಿದವನ ಉದ್ದೇಶ ಏನಿತ್ತು? ಘಟನೆ ನಡೆದಿದ್ದು ಹೇಗೆ? ಘಟನೆ ನಡೆದ ಬಳಿಕ ಆತ ಮನೆಯಲ್ಲೇ ಅಡಗಿ ಕೂತಿದ್ದು ಹೇಗೆ? ಚಾಕು ಇರಿದವನ ಹಿಂದೆ ಯಾವುದಾದರೂ ತಂಡ ಇದೆಯೇ? ಇನ್ನಿತರೆ ಪ್ರಶ್ನೆಗಳಿಗೂ ಈಗಲೂ ಉತ್ತರ ಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾದ ಆರೋಪಿಯ ಬಂಧನ ಆಗಬೇಕಿದೆ.