ನ್ಯೂಸ್ ನಾಟೌಟ್: ಗ್ರಾಹಕರ ಬೇಡಿಕೆಯಂತೆ ಕೆಲ ವರ್ಷಗಳ ಹಿಂದೆ ಗುತ್ತಿಗಾರಿನ ಮುಖ್ಯ ಪೇಟೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕಾರ್ಯ ನಿರ್ವಹಿಸುತ್ತಿತ್ತು.ಆದರೀಗ ಕಳೆದ ಒಂದು ತಿಂಗಳಿಂದ ಆ ಗ್ರಾಮದಲ್ಲಿರುವ ಒಂದೇ ಒಂದು ಎಟಿಎಂನ ಬಾಗಿಲಿಗೆ ಬೀಗ ಜಡಿಯಲಾಗಿದೆ. ಹೀಗಾಗಿ ಹಣ ವಿತ್ ಡ್ರಾ ಮಾಡಲು ಬರುವ ನೂರಾರು ಗ್ರಾಹಕರು ಬಾರಿ ಸಮಸ್ಯೆ ಎದುರಿಸುತ್ತಿದ್ದಾರೆ.ಇನ್ಯಾವಾಗ ಬಾಗಿಲು ತೆರೆಯುವುದೋ ಎಂದು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದಾಗಿ ಬ್ಯಾಂಕಿನ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು, ವ್ಯಾಪಾರಸ್ಥರು, ಗ್ರಾಹಕರು, ರೈತರಿಗೆ, ಹೆದ್ದಾರಿಯ ಮೇಲೆ ಸಂಚರಿಸುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ.
ಈ ಭಾಗದಲ್ಲಿ ಏಕೈಕ ಎಟಿಎಂ ಯಂತ್ರ ಇರುವುದರಿಂದ ನೂರಾರು ಜನರು ಕೆನರಾ ಬ್ಯಾಂಕ್ನ ಎಟಿಎಂ ಮೇಲೆ ಅವಲಂಬಿತರಾಗಿದ್ದಾರೆ.ಇಲ್ಲದಿದ್ದರೆ ತುಂಬಾ ದೂರ ಪ್ರಯಾಣಿಸಿ ಬೇರೆಡೆ ಹೋಗುವಂತಹ ಪರಿಸ್ಥಿತಿಯಿದೆ. ಇದರಿಂದಾಗಿ ಗ್ರಾಹಕರು, ರೈತರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಇನ್ನೂ ಕೆಲವರಿಗೆ ಗುತ್ತಿಗಾರಿನ ಮುಖ್ಯ ಪೇಟೆಗೆ ಬರಬೇಕಾದರೆ ಎರಡು ಮೂರು ಕಿಲೋ ದೂರ ಸಾಗಿ ಬರಬೇಕು.ಹೀಗೆ ಬಂದವರು ಬಾಗಿಲು ಮುಚ್ಚಿರುವ ಎಟಿಎಂ ಕಂಡು ಹಣ ಪಡೆದುಕೊಳ್ಳಲು ಸಾಧ್ಯವಾಗದೇ ಬ್ಯಾಂಕ್ ನ್ನೇ ಅವಲಂಬಿಸಬೇಕಾಗಿದೆ.ಆದರೆ ಎಟಿಎಮ್ ಸಮಸ್ಯೆಯಿಂದಾಗಿ ಪ್ರತಿದಿನ ಕೆಲಸಕ್ಕೆ ಹೋಗುವವರು ಕೂಡ ಬ್ಯಾಂಕ್ ಎದುರಲ್ಲೇ ದಿನ ಪೂರ್ತಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ದಿನಗೂಲಿ ನೌಕರರು ಬಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಎಟಿಎಂ ಇದ್ದರೆ ೫ ನಿಮಿಷದಲ್ಲಾಗುವ ಕೆಲಸಕ್ಕೆ ಬ್ಯಾಂಕ್ ಎದುರಿನಲ್ಲಿ ಗಂಟೆಗಟ್ಟಲೆ ಕುಳಿತುಕೊಂಡು ಕಾಲ ಕಳೆಯುವ ಅನಿವಾರ್ಯತೆ ಇವರಿಗೆ ಎದುರಾಗಿದೆ.
ಬಾಗಿಲು ಮುಚ್ಚಿ ತಿಂಗಳೇ ಕಳೆದಿದೆ!
ಹೌದು…ಎಟಿಎಂ ಬಾಗಿಲು ಮುಚ್ಚಿ ಒಂದು ತಿಂಗಳಾಗುತ್ತಾ ಬಂದರೂ ಇನ್ನೂ ಸರಿಯಾಗಿಲ್ಲ ಅನ್ನೋ ಅಳಲು ಇಲ್ಲಿನ ಗ್ರಾಹಕರಿಂದ ಕೇಳಿ ಬಂದಿದೆ.ಇಂದು ಸರಿಯಾಗ ಬಹುದು , ನಾಳೆ ಸರಿಯಾಗಬಹುದು ಎಂದು ಕಾದು ಕುಳಿತ ಗ್ರಾಹಕರೀಗ ಎಟಿಎಂ ಸರಿಯಾಗದೇ ಹೈರಾಣಾಗಿದ್ದಾರೆ.ಅನುಕೂಲ ಇದ್ದವರು ಬೇರೆ ಕಡೆ ಹೋಗಿ ಹಣ ವಿತ್ ಡ್ರಾ ಮಾಡಬಹುದು.ಆದರೆ ಪ್ರತಿ ದಿನ ಕೆಲಸಕ್ಕೆ ಹೋಗಿ ಜೀವನ ನಡೆಸುವವರು ,ಆಫೀಸ್ ಕೆಲಸ ನಿರ್ವಹಿಸುವವರು,ವ್ಯಾಪಾರಸ್ಥರು ಗಂಟೆಗಟ್ಟಲೇ ಬ್ಯಾಂಕ್ ನಲ್ಲಿ ಕುಳಿತುಕೊಳ್ಳಕ್ಕಾಗುತ್ತಾ ಎಂದು ಕೆಲವರು ಪ್ರಶ್ನಿಸಿದ್ದಾರೆ.ಒಟ್ಟಾರೆಯಾಗಿ ಇಲ್ಲಿನ ಪ್ರದೇಶದವರಿಗೆ ಹಣ ಇದ್ದೂ ಇಲ್ಲದಂತಹ ಪರಿಸ್ಥಿತಿ. ಹಣವನ್ನು ತೆಗೆಯುವುದೇ ಒಂದು ದೊಡ್ಡ ತಲೆನೋವಾಗುತ್ತಿದೆ ಎನ್ನುತ್ತಾರೆ ಗ್ರಾಹಕರು.ಇನ್ನಾದರೂ ಎಟಿಎಂನ ಸಮಸ್ಯೆಗಳಿಗೆ ಆದಷ್ಟು ಬೇಗ ಮುಕ್ತಿ ದೊರಕುವಂತಾಗಲಿ, ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕ್ ಶೀಘ್ರವೇ ಸ್ಪಂದಿಸಲಿ ಅನ್ನುವ ಒತ್ತಾಯ ಕೇಳಿ ಬಂದಿದೆ.