ನ್ಯೂಸ್ ನಾಟೌಟ್ : ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನೀಚರು ಹಾಲು ತುಂಬಿದ ಮೂರು ಹಸುಗಳ ಕೆಚ್ಚಲು ಕೊಯ್ದು ದುಷ್ಟತನ ತೋರಿದ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮಚ್ಚಿನಿಂದ ಹಸುವಿನ ಬಾಲಕ್ಕೆ ಹಾನಿಗೊಳಿಸಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ಕೊಂಡೊಯ್ದಿದ್ದಾರೆ. ನಿನ್ನೆ (ಜನವರಿ 18) ಮನೆಯಿಂದ ಮೇಯಲು ಹೋಗಿದ್ದ ಹಸು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು (ಜನವರಿ 19) ಬೆಳಿಗ್ಗೆ ಮಾಲೀಕ ಕೃಷ್ಣ ಆಚಾರಿ ಹಸುವಿಗಾಗಿ ಹುಡಕಾಟ ನಡೆಸಿದ್ದಾರೆ. ಆ ವೇಳೆ ಹಸುವಿನ ರಕ್ತ, ಕಾಲು ಹಾಗೂ ರುಂಡ ಪತ್ತೆಯಾಗಿದೆ. ಇದನ್ನು ನೋಡಿ ಹಸುವಿನ ಮಾಲೀಕ ಕೃಷ್ಣ ಆಚಾರಿ ಅಲ್ಲೇ ಅಸ್ವಸ್ಥರಾಗಿದ್ದಾರೆ.
ದುರುಳದು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ ದೇಹವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಭಕ್ಷಣೆಗಾಗಿ ಹಸುವಿನ ದೇಹವನ್ನು ಮಾತ್ರ ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿದೆ. ಕಾಡು ಪ್ರಾಣಿ ದಾಳಿ ಮಾಡಿದ್ರೆ ಹಸುವಿನ ದೇಹದ ಭಾಗಗಳು ಪ್ರತ್ಯೇಕವಾಗಿ ತುಂಡು ತುಂಡಾಗಿ ಬಿಳುವುದಿಲ್ಲ ಮತ್ತು ಹರಿತವಾದ ಆಯುಧದಿಂದ ಕತ್ತರಿಸಿದಂತೆ ಕಂಡಿದೆ. ಇದು ಮಾಂಸ ಭಕ್ಷಣೆಗೆಂದೇ ಮಾಡಿದ ಹೇಯ ಕೃತ್ಯ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.