ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಲಂಚ ಅನ್ನುವುದು ದೇಶದಲ್ಲಿ ದೊಡ್ಡ ಪಿಡುಗಾಗಿ ಆವರಿಸಿಕೊಂಡಿದೆ. ನಿಮ್ಮ ಒಂದು ಕೆಲಸಕ್ಕೆ ಲಂಚ ತೆಗೆದುಕೊಳ್ಳದೇ ಯಾವುದೇ ಕೆಲಸವೂ ಸರ್ಕಾರಿ ಕಚೇರಿಗಳಲ್ಲಿ ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೆಚ್ಚಿನ ಅಧಿಕಾರಿಗಳು ಲಂಚ ಕೇಳಿ ಸಿಕ್ಕಿ ಬೀಳುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ 5 ಕೆ.ಜಿ ‘ಬಟಾಟೆ’ ಲಂಚ ಕೇಳಿ ಇದೀಗ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ ಆತನ ಆಡಿಯೋ ಕೂಡ ವೈರಲ್ ಆಗಿದೆ.
ಕನೌಜ್ ನ ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್ಪುರ್ ಚಪುನ್ನಾ ಚೌಕಿಯ ಸಬ್ ಇನ್ಸ್ ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಆಲೂಗಡ್ಡೆಯನ್ನು ಲಂಚವಾಗಿ ಕೇಳಿ ಅಮಾನತುಗೊಂಡವನು. ಆತ ಲಂಚ ಕೇಳುತ್ತಿದ್ದಾನೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ವೈರಲ್ ಆಡಿಯೋದಲ್ಲಿ ರಾಮ್ ಕೃಪಾಲ್ ಸಿಂಗ್ ರೈತರೊಬ್ಬರ ಬಳಿ 5 ಕೆಜಿ ʼಆಲೂಗಡ್ಡೆʼಗೆ ಬೇಡಿಕೆ ಇಟ್ಟಿರುವುದು ಕೇಳಿಸುತ್ತದೆ. ಬಡ ರೈತ ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಬದಲಿಗೆ 2 ಕೆಜಿ ನೀಡುವುದಾಗಿ ಉತ್ತರಿಸುತ್ತಾರೆ. ನಂತರ ಅಂತಿಮವಾಗಿ ಒಪ್ಪಂದವನ್ನು 3 ಕೆಜಿಗೆ ಮಾಡಿಕೊಳ್ಳಲಾಯಿತು.
ಅಲೂಗಡ್ಡೆ ಅಷ್ಟೊಂದು ರೇಟಾ? ನಾವು ಅಡುಗೆಯಲ್ಲಿ ಬಳಸುವ ಈ ತರಕಾರಿಗೆ ಈ ಪರಿ ಬೇಡಿಕೆ ಸೃಷ್ಟಿಯಾಗಿದ್ದೇಗೆ? ಸಹಜವಾಗಿ ಈ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಮೂಲಗಳ ಪ್ರಕಾರ ಇಲ್ಲಿ ಆಲೂಗಡ್ಡೆ ಎನ್ನುವ ಪದವನ್ನು ಸಾಂಕಾತಿಕವಾಗಿ ಬಳಸಲಾಗಿದೆ. ಪ್ರಕರಣವೊಂದನ್ನು ಇತ್ಯರ್ಥಪಡಿಸಲು ರಾಮ್ ಕೃಪಾಲ್ ಸಿಂಗ್ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಆದರೆ ಹಣ ಎನ್ನುವ ಪದದ ಬದಲಾಗಿ ಆಲೂಗಡ್ಡೆ ಎಂದು ಕೋಡ್ವರ್ಡ್ ಬಳಸಿದ್ದಾನೆ. ಸದ್ಯ ಕನೌಜ್ ಎಸ್ಪಿ ಅಮಿತ್ ಕುಮಾರ್ ಆನಂದ್ ಅವರು ರಾಮ್ ಕೃಪಾಲ್ ಸಿಂಗ್ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಬಗ್ಗೆ ಇಲಾಖಾ ತನಿಖೆಗೂ ಸೂಚಿಸಲಾಗಿದೆ.