ಮಡಿಕೇರಿ : ಕಾಂಗ್ರೆಸ್ ನ ಹಡಗು ಸಮುದ್ರದ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದು ಮುಳುಗುತ್ತದೋ ಅಥವಾ ದಡ ಸೇರುತ್ತದೋ ಅನ್ನುವುದು ಗೊತ್ತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಗೂಟದ ಕಾರು ಬೇಕಾಗಿತ್ತು. ಇದಕ್ಕಿಂತ ಉನ್ನತ ಹುದ್ದೆ ಸಿಗುವುದಿಲ್ಲ ಎಂದು ಅವರಿಗೆ ಚೆನ್ನಾಗಿಯೇ ತಿಳಿದಿತ್ತು. ಹಾಗಾಗಿ ಅವರ ಮನಸ್ಸಿನಲ್ಲಿದ್ದ ಕೆಲಸಗಳೆಲ್ಲವೂ ಈಡೇರುತ್ತಿದ್ದಂತೆ ಕುಮಾರಸ್ವಾಮಿ ಅವರ ರಾಜೀನಾಮೆ ಕೊಡಿಸಿದರು ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಅಸಮಾಧಾನಗೊಂಡವರೆಲ್ಲಾ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದರು. ಸಿ.ಎಂ ಬೊಮ್ಮಾಯಿ ಸರಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಖಾತೆ ಹಂಚಿಕೆ ವಿಚಾರದಲ್ಲಿದ್ದ ಗೊಂದಲಗಳೆಲ್ಲವೂ ಈಗ ಶಮನವಾಗಿದೆ. ಹಾಗಾಗಿ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.