ನ್ಯೂಸ್ ನಾಟೌಟ್: ರಾಜ್ಯದಲ್ಲಿ ತೆಂಗಿನಕಾಯಿಯ ಬೆಲೆ 80 ರೂಪಾಯಿಗೆ ಏರಿಕೆಯಾಗಿದೆ. ಮಾತ್ರವಲ್ಲದೇ ನೆರೆಯ ರಾಜ್ಯ ಕೇರಳದಲ್ಲೂ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಕೇರಳದ ಕಲ್ಲಿಕೋಟೆಯ ಗ್ರಾಮವೊಂದರಲ್ಲಿ ಖದೀಮರು ತೆಂಗಿನ ಕಾಯಿಗಳನ್ನೇ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಇಲ್ಲಿ ತೆಂಗಿನ ಕಾಯಿಯ ಬೆಲೆ ಕೇಜಿಗೆ 30 ರೂ.ನಷ್ಟಿತ್ತು. ಆದರೆ ಏಕಾಏಕಿ 80 ರೂಪಾಯಿಗೆ ಏರಿಕೆ ಕಂಡಿರುವುದರಿಂದ ಖದೀಮರು ಇದನ್ನೇ ಬಂಡವಾಳವಾಗಿಸಿಕೊಂಡಿದ್ದು, ತೆಂಗಿನಕಾಯಿ ಕಳ್ಳತನ ಹೆಚ್ಚಳವಾಗಿದೆ.
ನಿರಂತರವಾಗಿ ಗ್ರಾಮದಲ್ಲಿ ತೆಂಗಿನ ಕಾಯಿಗಳ ಕಳ್ಳತನಕ್ಕೆ ಬೇಸತ್ತ ಅಂಗಡಿಗಳು ಹಾಗೂ ತೋಟಗಳ ಮಾಲೀಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಅಲ್ಲದೇ ತಮ್ಮ ಜಾಗದಲ್ಲಿ ಸಿಸಿಟಿವಿಗಳನ್ನು ಕೂಡ ಅಳವಡಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ 500 ತೆಂಗಿನಕಾಯಿ ತನಕ ಕಳವಾಗಿದೆ ಎಂದು ಸುಮಾರು 5 ದೂರುಗಳು ದಾಖಲಾಗಿವೆ. ಹೀಗಾಗಿ ಪೊಲೀಸರು ಅಂಗಡಿಕಾರರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ತೆಂಗಿನಕಾಯಿಗಳನ್ನು ಅಂಗಡಿಗಳ ಒಳಗೆ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ತಳ್ಳು ಗಾಡಿಯಲ್ಲಿ ತೆಂಗಿನಕಾಯಿ ಮಾರುವವರು ಸದಾ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.