ನ್ಯೂಸ್ ನಾಟೌಟ್ : ಜೀವಂತ ಇರುವಾಗಲೇ ಅಜ್ಜಿ ಮತ್ತು ವ್ಯಕ್ತಿಯನ್ನು ಸಾಯಿಸಿ ಮರಣ ಪತ್ರ ನೀಡಿರುವ ಘಟನೆ ನಂಜನಗೂಡಿನಲ್ಲಿ ಇಂದು(ಜೂನ್ 17) ನಡೆದಿದೆ. ನಂಜನಗೂಡು ತಾಲೂಕಿನ ಗೀಕಹಳ್ಳಿ ಗ್ರಾಮದ ಬಸಮ್ಮ ಎಂಬ ಅಜ್ಜಿಗೆ ಜೀವಂತವಿದ್ದರೂ ಮರಣ ದೃಢೀಕರಣ ಪತ್ರವನ್ನು ಸೃಷ್ಟಿ ಮಾಡಿ ಅಧಿಕಾರಿಗಳು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಬಸಮ್ಮ 15-03-1981 ರಲ್ಲೇ ಮರಣ ಹೊಂದಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ನೀಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಕೆ ಮಾಡಲು ವಿದೇಶದಲ್ಲಿರುವ ಚಂದ್ರಶೇಖರ್ ಅವರು ಬದುಕಿದ್ದರೂ ಡೆತ್ ಸರ್ಟಿಫಿಕೇಟ್ ಮಾಡಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ದೂರಲಾಗಿದೆ.
ಮುಳ್ಳೂರು ಗ್ರಾಮದ ಸರ್ವೇ ನಂ. 442 ರಲ್ಲಿ 01.26 ಹಾಗೂ 444 ರಲ್ಲಿ 01.30 ಗುಂಟೆ ಆಸ್ತಿಯನ್ನು ಕೃಷ್ಣೇಗೌಡ, ಶಿವಮಲ್ಲೇಗೌಡ ಎಂಬುವರಿಗೆ ಅಕ್ರಮವಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. 2022 ನೇ ಸಾಲಿನಲ್ಲಿ ಖಾತೆ ಬದಲಾಯಿಸಿರುವ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಕಸಭಾ ಹೋಬಳಿ ರಾಜಸ್ವ ನಿರೀಕ್ಷಕ ಪ್ರಕಾಶ್, ತಹಸೀಲ್ದಾರ್ ಶಿವಮೂರ್ತಿ ಹಾಗೂ ಶಿರಸ್ತೇದಾರ್ ಶ್ರೀನಾಥ್ ಮೇಲೆ ಆರೋಪ ಕೇಳಿಬಂದಿದೆ.