ನ್ಯೂಸ್ ನಾಟೌಟ್: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಆರ್ ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಸರ್ಕಾರದ ವತಿಯಿಂದ ಈ ಅವಘಡದಲ್ಲಿ ಸಾವಿಗೀಡದವರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಹಾಗೆಯೇ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡಿತ್ತು.
ಸರ್ಕಾರದ ಬಳಿಕ ಕೆಎಸ್ ಸಿಎ (KSCA) ಕೂಡ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಧನವಾಗಿ 5 ಲಕ್ಷ ನೀಡುವುದಾಗಿ ಹೇಳಿತ್ತು. ಇದೀಗ ಆರ್ಸಿಬಿ ಫ್ರಾಂಚೈಸಿ ( RCB Management ) ಕೂಡ ಮಡಿದ ಆರ್ಸಿಬಿ ಅಭಿಮಾನಿಗಳ ಕುಟುಂಬಗಳ ನೆರವಿಗೆ ಮುಂದಾಗಿದೆ.ಅಲ್ಲದೆ ಈ ಅವಘಡದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಅಭಿಮಾನಿಗಳ ಚಿಕಿತ್ಸೆಗಾಗಿ ಆರ್ ಸಿಬಿ ಕೇರ್ ನಿಧಿಯನ್ನು ಸಹ ರಚನೆ ಮಾಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ, ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಕಾಲ್ತುಳಿತ ಸಂಭವಿಸಿತು, ಇದರಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರೆ, 20 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಅಭಿಮಾನಿಗಳು ಸಾವನ್ನಪ್ಪಿದಾಗ ಕೇವಲ 1 ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದು, ಮಡಿದವರ ಕುಟುಂಬಗಳಿಗೆ ಹಾಗೂ ಗಾಯಾಳುಗಳ ನೆರವಿಗೆ ಬರದಿರುವುದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿತ್ತು. ಆದರೆ ಘಟನೆ ನಡೆದ ಒಂದು ದಿನದ ಬಳಿಕ ಮೃತರಿಗೆ ಆರ್ಥಿಕ ಪರಿಹಾರವನ್ನು ಘೋಷಿಸಿರುವ ಫ್ರಾಂಚೈಸಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿ ಮೃತರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದೆ. ಇದಲ್ಲದೆ, ಫ್ರಾಂಚೈಸಿ ‘ಆರ್ ಸಿಬಿ ಕೇರ್ಸ್’ ಎಂಬ ನಿಧಿಯನ್ನು ರಚಿಸುವುದಾಗಿ ಘೋಷಿಸಿದೆ. ಅದರ ಮೂಲಕ ಈ ದುರಂತದಲ್ಲಿ ಗಾಯಗೊಂಡ ಅಭಿಮಾನಿಗಳಿಗೂ ಸಹ ಸಹಾಯ ಮಾಡಲಾಗುವುದು ಎಂದು ತಿಳಿಸಿದೆ.