ನ್ಯೂಸ್ ನಾಟೌಟ್: ಕ್ರಿಕೆಟ್ ಲೋಕದ ಅಂಕಿ-ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿಗಳು ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ (ಮೇ6) ನಿಧನರಾಗಿದ್ದಾರೆ.
ಅವರಿಗೆ 85 ವರ್ಷ ವಯಸ್ಸಾಗಿತ್ತು. ಕೇಶವಮೂರ್ತಿಗಳು ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಕ್ರಿಕೆಟ್ ಲೋಕದ ಹತ್ತು ಹಲವು ದಾಖಲೆಗಳ ಬಗ್ಗೆ ಬಹಳಷ್ಟು ಜ್ಞಾನ ಹೊಂದಿದ್ದ ಅವರು ರಾಜ್ಯದ ಕ್ರೀಡಾ ಪತ್ರಕರ್ತರ ಮಾರ್ಗದರ್ಶಿಯಂತಿದ್ದರು. ಅವರ ಅಂಕಿ-ಅಂಶಗಳಿಲ್ಲದೆ ಕ್ರೀಡಾಪುಟಗಳು ಎಂದಿಗೂ ಭರ್ತಿಯಾಗುತ್ತಿರಲಿಲ್ಲ.
ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಜೊತೆಗೆ ಬಹಳಷ್ಟು ವರ್ಷಗಳ ಒಡನಾಟ ಹೊಂದಿದ್ದ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸೇರಿದಂತೆ ದಿಗ್ಗಜ ಕ್ರಿಕೆಟಿಗರ ಸಖ್ಯ ಬೆಳೆಸಿಕೊಂಡಿದ್ದರು. ಅದರಲ್ಲೂ ಸಚಿನ್ ತೆಂಡೂಲ್ಕರ್ ಬಗ್ಗೆ ಪುಸ್ತಕ ಬರೆದಿದ್ದರು.
ಈ ಪುಸ್ತಕದ ಬಗ್ಗೆ ಸಚಿನ್ ಕೂಡ ಖುದ್ದಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಒಳ್ಳೆಯ ಬರಹಗಾರರಾಗಿದ್ದ ಅವರು ಸುಮಾರು 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ನಿಧನಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಮೃತರು ಮಗಳು ಸವಿತಾ, ಮಗ ಸಂಜಯ್ , ಪತ್ನಿ ಶಾಂತಿ ಅವರನ್ನು ಅಗಲಿದ್ದಾರೆ.