ನ್ಯೂಸ್ ನಾಟೌಟ್: ಧಾರವಾಡದಲ್ಲಿ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿಯೋರ್ವನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡದ ಹುರಕಡ್ಲಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲೆಂದು ಜೆಎಸ್ಎಸ್ ಕಾಲೇಜಿನ ನಂದನ್ ಏರಿ ಎಂಬ ವಿದ್ಯಾರ್ಥಿ ಬಂದಿದ್ದ. ಈತನ ಕೊರಳಲ್ಲಿದ್ದ ಜನಿವಾರ ಗಮನಿಸಿದ್ದ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟು ನಂತರ ಆತನನ್ನು ಪರೀಕ್ಷಾ ಕೇಂದ್ರದ ಒಳಗಡೆ ಬಿಟ್ಟಿದ್ದಾರೆ.
ಶಿವಮೊಗ್ಗ ಮತ್ತು ಬೀದರ್ನಲ್ಲಿ ಸಿಇಟಿ ಪರೀಕ್ಷಾ ಬರೆಯಲು ತೆರಳಿದ್ದ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಧಾರವಾಡದಲ್ಲೂ ಇಂಥ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ
ವಿದ್ಯಾರ್ಥಿ ತಾನು ಜನಿವಾರ ತೆಗೆದು ಬ್ಯಾಗ್ನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ವಿನಂತಿಸಿದರೂ ಕೇಳದ ಸಿಬ್ಬಂದಿ, ಆ ಜನಿವಾರವನ್ನು ಕತ್ತರಿಸಿ ಆತನ ಕೈಗೆ ಕೊಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿ ನಂದನ್ ಆಘಾತಕ್ಕೊಳಗಾಗಿದ್ದಾನೆ. ಕತ್ತರಿಸಿದ ಜನಿವಾರವನ್ನು ವಿದ್ಯಾರ್ಥಿ ತನ್ನ ಬ್ಯಾಗ್ನಲ್ಲೇ ಇಟ್ಟುಕೊಂಡಿದ್ದ. ಎರಡು ದಿನದ ಬಳಿಕ ಆತನಿಗೆ ಮನೆಯವರು ಹೊಸ ಜನಿವಾರ ಹಾಕಿದ್ದಾರೆ. ಬೀದರ್, ಶಿವಮೊಗ್ಗದಲ್ಲಿ ನಡೆದ ಜನಿವಾರ ಗಲಾಟೆಯನ್ನು ನೋಡಿ ಕೊನೆಗೆ ನಂದನ್ ತನಗೂ ಆದ ಪರಿಸ್ಥಿತಿ ಬಗ್ಗೆ ತನ್ನ ತಂದೆಯ ಮುಂದೆ ಹೇಳಿದ್ದಾನೆ. ಅಲ್ಲಿಯವರೆಗೂ ಈ ಬಗ್ಗೆ ನಂದನ್ ಮನೆಯಲ್ಲಿ ಘಟನೆ ಕುರಿತು ಹೇಳಿರಲಿಲ್ಲ. ಈ ಘಟನೆ ಕುರಿತು ವಿದ್ಯಾರ್ಥಿ ನಂದನ್ ತಂದೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.