ನ್ಯೂಸ್ ನಾಟೌಟ್: ಆಪರೇಷನ್ ಹಸ್ತದಿಂದ ಯಾರೂ ಕೂಡ ಬಿಜೆಪಿ ತೊರೆಯಲ್ಲ, ಆದರೆ ಕಾಂಗ್ರೆಸ್ನ 40-45 ಪ್ರಮುಖ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ ಜಿ ಮಹೇಶ್ ಹೇಳಿರುವುದು ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಂ ಜಿ ಮಹೇಶ್ , ಯಾರೂ ಕೂಡ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಆ ರೀತಿಯ ಯಾವುದೇ ವಾತಾವರಣ ಇಲ್ಲ. ಆತಂಕವೂ ಇಲ್ಲ, ಇದರ ನಡುವೆ ಸಂತೋಷ್ ಅವರಂತಹ ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳನ್ನೇ ಅನೇಕ ಜನ ಕಾಂಗ್ರೆಸ್ಸಿಗರು ಸಂಪರ್ಕ ಮಾಡಿರುವುದನ್ನು ಸ್ವತಃ ಸಂತೋಷ್ ಇಂದಿನ ಸಭೆಯಲ್ಲೇ ಉಲ್ಲೇಖಿಸಿದ್ದಾರೆ. 40-45 ಪ್ರಮುಖ ನಾಯಕರು ಸಂಪರ್ಕ ಮಾಡಿದ್ದನ್ನು ಉಲ್ಲೇಖ ಮಾಡಿದ್ದಾರೆ ಎಂದು ರಿವರ್ಸ್ ಆಪರೇಷನ್ ಸುಳಿವು ನೀಡಿದ್ದಾರೆ.
ಆಪರೇಷನ್ ಹಸ್ತದ ಭ್ರಮೆ ಇದೆ. ಆದರೆ ನಾವ್ಯಾರು ಅದರಲ್ಲಿ ಬೀಳುವ ಅವಶ್ಯಕತೆ ಇಲ್ಲ, ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ಸುದ್ದಿಯ ಪ್ರಮಾಣದಲ್ಲಿ ಯಾವುದೇ ಪಕ್ಷಾಂತರದ ಚಟುವಟಿಕೆಗಳು ನಡೆಯುತ್ತಿಲ್ಲ. ಆದರೆ ಬಿಜೆಪಿಯನ್ನು ದುರ್ಬಲ ಮಾಡಲು ಕಾಂಗ್ರೆಸ್ ಹೊರಟಿರುವುದು ಆ ತಂತ್ರದ ಒಂದು ಭಾಗ ಎಂದಿದ್ದಾರೆ.
ಸಂತೋಷ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದಲ್ಲಿ ಎಡಪಂಥೀಯರ ಪ್ರೇರಣೆ ಮೇಲೆ ನಡೆಯುತ್ತಿರುವ ಸರ್ಕಾರವಿದೆ.
ಆ ಸರ್ಕಾರದ ಅನೇಕ ತಪ್ಪು ಅಭಿಪ್ರಾಯಗಳನ್ನು ಬಿತ್ತರಿಸಲಾಗುತ್ತಿದೆ. ಅವರ ಷಡ್ಯಂತ್ರಕ್ಕೆ ಬಿಜೆಪಿಯ ಯಾರೂ ಒಳಗಾಗಬಾರದು. ಪಕ್ಷಾಂತರದ ವಿಚಾರ ಸೇರಿದಂತೆ ಎಲ್ಲ ವಿಚಾರದಲ್ಲೂ ಕಾರ್ಯಕರ್ತರು ಒಂದಾಗಿ ಒಂದೇ ದೃಢ ನಿಶ್ಚಯದಿಂದ ಇಂದು ಬಂದಿರುವ ಸವಾಲು ಎದುರಿಸಬೇಕು. ಮತ್ತೊಮ್ಮೆ ಬಿಜೆಪಿಯನ್ನು ಲೋಕಸಭಾ ಮತ್ತು ಮುಂದಿನ ಚುನಾವಣೆಗಳಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರೇರಣಾದಾಯಕ ಮಾತುಗಳನ್ನ ಹೇಳಿದ್ದಾರೆ ಎಂದು ಮಹೇಶ್ ತಿಳಿಸಿದ್ದಾರೆ.
ಬಿಜೆಪಿ ವಿಚಾರಧಾರೆಯನ್ನು ಒಪ್ಪಿ ಪಕ್ಷಕ್ಕೆ ಬಂದಿರುವವರ ಜೊತೆ ಸೇರಿಕೊಂಡು ಸಮರ್ಪಕವಾದ ರಚನಾತ್ಮಕವಾದ ವಿರೋಧ ಪಕ್ಷವಾಗಿ ಸರ್ಕಾರದ ಪ್ರತಿಯೊಂದು ತಪ್ಪುಗಳನ್ನ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸುತ್ತಾ ನಾವೆಲ್ಲ ಒಂದಾಗಿ ಯೋಚನೆ ಮಾಡಬೇಕು. ಹೋರಾಟ ನಡೆಸಬೇಕು ಎಂದು ಸಂತೋಷ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.