ನ್ಯೂಸ್ ನಾಟೌಟ್ : ಗಾಯಕ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ವಿಜೇತ ಹಳ್ಳಿಹೈದ ಹನುಮಂತು ಮೊನ್ನೆಯಷ್ಟೇ ಫಿಲ್ಮ್ಗೆ ಹೋಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದೀಗ ಕರ್ನಾಟಕದ ಮಾಜಿ ಸಚಿವರೊಬ್ಬರು ಹನುಮಂತುಗೆ ಕರೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಹಳ್ಳಿ ಹೈದ ಹನುಮಂತು ರಾಜಕೀಯಕ್ಕೆ ಬರುತ್ತಾರಾ ಎಂಬ ಬಿಸಿ ಬಿಸಿ ಚರ್ಚೆ ಜೋರಾಗಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಕೆಲವೇ ದಿನಗಳಲ್ಲಿ ಇಡೀ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ್ರು.ಹನುಮಂತನ ನ್ಯಾಯಪರ ಆಟ ಮತ್ತು ಸಹ ಸ್ಪರ್ಧಿಗಳು ಮಾಡುತ್ತಿದ್ದ ಕುಂತತ್ರಗಳನ್ನು ನೋಡುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರು ಆತನ ನಡೆ ನುಡಿಯನ್ನು ಇಷ್ಟ ಪಡುತ್ತಿದ್ದರು.ಫಿನಾಲೆ ವಾರದಲ್ಲಿ ಹನುಮಂತನಿಗೆ 5.3 ಕೋಟಿ ವೋಟ್ ಮಾಡುವ ಮೂಲಕ ಬಿಗ್ ಬಾಸ್ ಟ್ರೋಫಿ ವಿಜೇತನಾಗುವುದಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಹನುಮಂತಗೆ ಸ್ಟಾರ್ ಪಟ್ಟ ಸಿಕ್ಕಿದೆ.
ಇದರ ನಂತರ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಭಾಗವಹಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳಿಗೆ ಸಿನಿಮಾದ ಆಫರ್ಗಳು ಬಂದಿವೆ. ಇದರ ಬೆನ್ನಲ್ಲಿಯೇ ಹನುಮಂತನಿಗೆ ಕೂಡ ಬಂದಿತ್ತು.ಇದೀಗ ಹನುಮಂತನಿಗೆ ಮತ್ತೊಂದು ಆಫರ್ ಕೂಡ ಬಂದಿದೆ. ಅದೇ ರಾಜಕೀಯ ಆಫರ್ ಎಂದು ಕೆಲವರು ಹೇಳುತ್ತಿದ್ದಾರೆ. ಸ್ವತಃ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ, ಮಾಜಿ ಸಚಿವರೇ ಹನುಮಂತುಗೆ ಕರೆ ಮಾಡಿದ್ದರಿಂದ ಸ್ಥಳೀಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂಬ ಚರ್ಚೆಗಳು ಶುರುವಾಗಿವೆ.
ಕಳೆದ 4 ದಿನಗಳ ದಿನಗಳ ಹಿಂದೆ ಹಾವೇರಿ ಜಿಲ್ಲೆಯ ರಾಜಕೀಯ ನಾಯಕ ಹಾಗೂ ಮಾಜಿ ಕೃಷಿ ಸಚಿವರೂ ಆಗಿರುವ ಬಿ.ಸಿ. ಪಾಟೀಲ್ ಅವರು ಕರೆ ಮಾಡಿ, ಕಂಗ್ರಾಜುಲೇಷನ್ಸ್ ಹನುಮಂತು. ಹಾವೇರಿ ಘನತೆ ಗೌರವವನ್ನು ಎತ್ತಿ ಹಿಡಿದಿದ್ದೀಯ. ನಾನು ನಿಮ್ಮನ್ನು ನೋಡ್ತಿದ್ದೇನೆ ತುಂಬಾ ಚೆನ್ನಾಗಿ ಆಟವಾಡಿದ್ದೀರಿ ಎಂದು ಹೇಳಿದ್ದಾರೆ. ಈ ಆಡಿಯೋವನ್ನು ಸ್ವತಃ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಪೋಸ್ಟ್ಗೆ ‘ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 11ರ ವಿಜೇತರಾದ ನಮ್ಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಶ್ರೀ ಹನುಮಂತ ಲಮಾಣಿ ಅವರಿಗೆ ಇಂದು ದೂರವಾಣಿ ಕರೆಯ ಮೂಲಕ ಮಾತನಾಡಿ, ಶುಭಾಶಯ ತಿಳಿಸಿದ ಸಂದರ್ಭ’ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರಾಜಕೀಯ ನಾಯಕರು ಹನುಮಂತನನ್ನು ರಾಜಕೀಯಕ್ಕೆ ಕರೆತರುವುದಕ್ಕೆ ಚಿಂತನೆ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ಸ್ಥಳೀಯವಾಗಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನೆರವಾಗಲಿದೆ ಎಂಬುದು ಅವರ ಆಶಯವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಹನುಮಂತನನ್ನು ಸೆಳೆಯಲು ಮುಂದಾಗಿವೆ.