ನ್ಯೂಸ್ ನಾಟೌಟ್ :ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ.ಬೆಂಗಳೂರು ಕೊಟ್ಟಿಗೆಪಾಳ್ಯದ ನಿವಾಸಿ ಗಿರೀಶ್ ಕುಮಾರ್ ಎಂಬುವವರು ಸುದೀರ್ಘ ಪತ್ರದೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಐಪಿಎಲ್-ಆರ್ಸಿಬಿ ವಿಜಯೋತ್ಸವಕ್ಕೆ ಸಾರ್ವಜನಿಕರನ್ನು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದಾರೆ.ಸರಿಯಾದ ವ್ಯವಸ್ಥೆ ಮಾಡದೇ,ನಿರ್ಲಕ್ಷ್ಯ ವಹಿಸಿದ ಕಾರಣ ಅಮಾಯಕರ ಸಾವು-ನೋವಾಗಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದಾರೆ.18 ವರ್ಷಗಳ ಬಳಿಕ ಆರ್ಸಿಬಿ ಕ್ರಿಕೆಟ್ ತಂಡ ಐಪಿಎಲ್ನಲ್ಲಿ ಟ್ರೋಫಿ ಗೆದ್ದಿದೆ. ಐಪಿಎಲ್ ಮೂಲ ಸಿದ್ಧಾಂತವೇ ವ್ಯಾಪಾರ, ಆದಾಯ ಗಳಿಸುವಿಕೆ, ಇದು ರಾಜ್ಯ, ರಾಷ್ಟ್ರಮಟ್ಟದಲ್ಲಿ ದೇಶ ಪ್ರೇಮ ಜಾಗೃತಗೊಳಿಸುವ ಕೆಲಸವನ್ನೇನು ಮಾಡುವುದಿಲ್ಲ. ಐಪಿಎಲ್ನಿಂದ ಜೂಜಾಡಿಕೊಂಡು ಮನೆ – ಮಠ ಕಳೆದುಕೊಂಡಿರುವ ಪ್ರಕರಣಗಳಿವೆ. ಮ್ಯಾಚ್ ಫಿಕ್ಸಿಂಗ್ನಲ್ಲೂ ಭಾಗಿಯಾದ ಪ್ರಕರಣಗಗಳಿವೆ. ಖಾಸಗಿಯವರು ಆಟಗಾರರನ್ನ ಕೊಂಡುಕೊಂಡು ತಂಡಗಳನ್ನು ಮಾಡಿಕೊಂಡು ಆಟ ಆಡಿಸುತ್ತಾ ಅದರಲ್ಲಿ ಲಾಭದ ಉದ್ದೇಶವನ್ನೇ ಹೊಂದಿದ್ದಾರೆ. ಆಟಗಾರರಲ್ಲೂ ಸಹ ಉನ್ನತ ಸಿದ್ಧಾಂತ ಇರೋದಿಲ್ಲ. ಹೆಚ್ಚು ಹಣ ಕೊಟ್ಟವರ ತಂಡಕ್ಕಾಗಿ ಆಡುತ್ತಾರೆ. ಈ ರೀತಿ ಗೆದ್ದವರಿಗೆ ಸರ್ಕಾರದ ಮಟ್ಟದಲ್ಲಿ ವೈಭದಿಂದ ಗೌರವಿಸಬಹುದೇ? ಇವರನ್ನ ಸ್ವತಃ ಡಿಸಿಎಂ ಹೋಗಿ ಏರ್ಪೋರ್ಟ್ನಲ್ಲಿ ಸ್ವಾಗತಿಸಿದ್ದಾರೆ.
ಹಾಗೇ ನೋಡಿದ್ರೆ ರಾಷ್ಟ್ರ, ರಾಜ್ಯಕ್ಕಾಗಿ ಆಡಿ ಪದಕ ಪಡೆದ ಅನೇಕ ಜನ ಆಟಗಾರರಿದ್ದಾರೆ. ಈ ಮಟ್ಟದಲ್ಲಿ ಸರ್ಕಾರಗಳಲ್ಲಿ ಆದ್ಯತೆ ಕೊಟ್ಟಿರುವುದಿಲ್ಲ. ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಯೋಧರ ಮನೆಗೂ ಭೇಟಿ ಕೋಡಲು ಆಸಕ್ತಿ ತೋರಲ್ಲ. ಆದ್ರೆ ಈ ತಂಡಕ್ಕೆ ಸ್ವಾಗತ ಕೋರಿರುವುದು ಎಷ್ಟು ಸರಿ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.