ನ್ಯೂಸ್ ನಾಟೌಟ್: ಬೆಂಗಳೂರಿನ ತುರಹಳ್ಳಿ ಫಾರೆಸ್ಟ್ ಪಕ್ಕದ ಬನಶಂಕರಿ 6ನೇ ಹಂತದ ಫಸ್ಟ್ ಬ್ಲಾಕ್ ನಲ್ಲಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. 3 ತಿಂಗಳಲ್ಲಿ 10ಕ್ಕೂ ಹೆಚ್ಚು ನಾಯಿ, ಮೇಕೆ, ಕುರಿಯನ್ನು ಚಿರತೆ ಕೊಂದಿದೆ ಎನ್ನಲಾಗುತ್ತಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಬೆಳಗ್ಗೆ, ಸಂಜೆ ವೇಳೆ ಮನೆಯಿಂದ ಹೊರಬರಲು ನಿವಾಸಿಗಳಿಗೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸಲು ಪೋಷಕರು ಭಯ ಬೀಳುತ್ತಿದ್ದಾರೆ. ಡೆಲಿವರಿ ಬಾಯ್ಸ್ ಯಾವುದೇ ವಸ್ತುಗಳನ್ನು ಸಪ್ಲೈ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿರತೆ ಪ್ರತ್ಯಕ್ಷ ಹಿನ್ನೆಲೆ ನೀರಿನ ಟ್ಯಾಂಕರ್ ನವರೂ ಏರಿಯಾಗೆ ಬರುತ್ತಿಲ್ಲ. ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ನಿವಾಸಿಗಳು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಬಿಎಂಟಿಸಿ ಬಸ್ ಚಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಹಾಗಾಗಿ ನಿವಾಸಿಗಳು ಜೀವ ಕೈಯಲ್ಲಿಡಿದು ಜೀವನ ಮಾಡುವಂತಾಗಿದೆ. ನಿವಾಸಿಯೊಬ್ಬರು ಈ ಬಗ್ಗೆ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ಅಪಾರ್ಟ್ಮೆಂಟ್ನ ಪಕ್ಕದಲ್ಲಿರುವ ತುರಹಳ್ಳಿ ಅರಣ್ಯದೊಳಗಿನ ಬಂಡೆಯೊಂದರ ಮೇಲೆ ಚಿರತೆ ಮಲಗಿಕೊಂಡಿರುವುದು ಕಂಡುಬಂದಿದೆ.