ಕರಾವಳಿಕ್ರೈಂ

ಬೆಳ್ತಂಗಡಿ: ಬೂದಿ ಮೂಸಲು ಹೇಳಿ ಕಣ್ಕಟ್ಟು ಮಾಡಿ ಯುವಕನ ಕಿಸೆಯಿಂದ ಸಾವಿರಾರು ರೂ. ದೋಚಿದ ಬೂದಿ ಸಾಧುಗಳು..! ಕಿಸೆಯಲ್ಲಿದ್ದ ದುಡ್ಡನ್ನೆಲ್ಲ ಯುವಕ ಸಾಧುಗಳ ಕೈಗೆ ಕೊಟ್ಟಿದ್ದು ಹೇಗೆ?

203

ನ್ಯೂಸ್ ನಾಟೌಟ್ : ಜನರನ್ನು ಕಣ್ಕಟ್ಟು ಮಾಡಿ ವಂಚಿಸುವ ಬೂದಿ ಸಾಧುಗಳ ಗ್ಯಾಂಗ್ ವೊಂದು ಯುವಕನೊಬ್ಬನ ಕಿಸೆಯಿಂದ ಸಾವಿರಾರು ರೂ. ದೋಚಿ ಎಸ್ಕೇಪ್ ಆಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಿಂದ ವರದಿಯಾಗಿದೆ. ಬೂದಿ ಸಾಧುಗಳ ವಶೀಕರಣಕ್ಕೆ ಯುವಕ ತನ್ನನ್ನು ತಾನು ಮರೆತು ಕೈಯಲ್ಲಿ ಇರುವ ಹಣವನ್ನೆಲ್ಲ ತೆಗೆದುಕೊಟ್ಟಿದ್ದಾನೆ. ಈ ಪ್ರಕರಣ ಕೊನೆಗೆ ಪೊಲೀಸ್ ಠಾಣೆ ಮಟ್ಟಿಲೇರಿತು ಅನ್ನುವುದು ವಿಶೇಷ.

ಬೆಳ್ತಂಗಡಿ ಮಾರ್ಗವಾಗಿ ಕಾರ್ ಒಂದು ಶೃಂಗೇರಿ ಕಡೆಗೆ ಪ್ರಯಾಣ ಮಾಡುತ್ತಿತ್ತು. ಗುಜರಾತ್ ರಿಜಿಸ್ಟ್ರೇಷನ್ ಹೊಂದಿರುವ ಆ ಇಂಡಿಕಾ ಕಾರಿನಲ್ಲಿ ಒಟ್ಟು ನಾಲ್ಕು ಜನ ಸಾಧುಗಳ ವೇಷಭೂಷಣದಲ್ಲಿ ಪ್ರಯಾಣಿಸುತ್ತಿದ್ದರು. ಹಾಗೆ ಅವರು ಹೋಗುತ್ತಿರುವಾಗ ವೇಣೂರಿನಲ್ಲಿ ಯುವಕನೊಬ್ಬ ನಿಂತಿದ್ದ. ಆ ಯುವಕನನ್ನು ನೋಡಿ ದಾರಿ ಕೇಳುವ ನೆಪದಲ್ಲಿ ಪ್ರಶ್ನಿಸಿದ್ದಾರೆ. ಬೈಕ್ ಪಾರ್ಕ್ ಮಾಡಿಕೊಂಡು ನಿಂತಿದ್ದ ಯುವಕ ಸ್ನೇಹಿತರೊಬ್ಬರ ಬರುವಿಕೆಗಾಗಿ ಕಾಯುತ್ತಿದ್ದರು. ಅವರಲ್ಲಿ ಸಾಧುಗಳು ಶೃಂಗೇರಿಗೆ ಹೋಗುವ ದಾರಿಯನ್ನು ಕೇಳಿದ್ದಾರೆ. ಯುವಕ ದಾರಿಯನ್ನೂ ತಿಳಿಸಿದ್ದಾರೆ.

ಈ ವೇಳೆ ಸಾಧುಗಳ ವೇಷದಲ್ಲಿದ್ದ ಅಪರಿಚಿತರು ಯುವಕನಿಗೆ ಆಶೀರ್ವಾದ ಮಾಡಿದ್ದಾರೆ. ಆಶೀರ್ವಾದದ ಬಳಿಕ ಯುವಕನ ಜೊತೆಗೆ ಸಾಧುಗಳು ದಕ್ಷಿಣೆಯನ್ನು ಕೇಳಿದ್ದಾರೆ. ಈ ವೇಳೆ ಯುವಕ ಆಶೀರ್ವಾದ ನೀಡಿದ ಸ್ವಾಮೀಜಿಗಳಿಗೆ ಮೊದಲು 500 ರೂಪಾಯಿ ಕೊಟ್ಟಿದ್ದಾನೆ. ಈ ವೇಳೆ ಯುವಕನ ಕೈಗೆ ಭಸ್ಮವೊಂದನ್ನು ನೀಡಿ ಅದನ್ನು ಮೂಸಲು ಹೇಳುತ್ತಾರೆ ಸಾಧುಗಳು. ಅದರಂತೆ ಯುವಕ ಮೂಸಿದಾಗ ಆತ ತನ್ನನ್ನೇ ತಾನು ಮರೆತು ಹೋಗಿದ್ದಾನೆ. ಆ ಕ್ಷಣದಲ್ಲಿ ಸಾಧುಗಳು ಕೇಳಿದಷ್ಟು ಹಣವನ್ನು ತೆಗೆದುಕೊಟ್ಟಿದ್ದಾನೆ. ಕಣ್ಣ್ ಕಟ್ಟಿಗೆ ಒಳಗಾದ ಯುವಕ ತನ್ನಲ್ಲಿದ್ದ ಎಲ್ಲಾ ಸುಮಾರು ನಾಲ್ಕುವರೆ ಸಾವಿರದಷ್ಟು ದುಡ್ಡು ಈ ರೀತಿ ಸಾಧು ವೇಷಧಾರಿಗಳ ಕೈಗೆ ಸಾಗಿದೆ. ಆ ಸಂದರ್ಭದಲ್ಲಿ ಯುವಕನಿಗೆ ಫೋನ್ ಕರೆ ಬಂದಿದ್ದರೂ, ಅದರ ಕಡೆ ಕೂಡ ಆತನ ಗಮನವಿರಲಿಲ್ಲ ಎಂದು ತಿಳಿದು ಬಂದಿದೆ.

ಈ ಘಟನೆ ನಡೆಯುತ್ತಿರುವಾಗಲೇ ಆ ಯುವಕನ ಫಿಟ್ಟರ್ ಗೆಳೆಯ ಅಲ್ಲಿಗೆ ಬಂದಿದ್ದಾನೆ. ತನ್ನ ಗೆಳೆಯ ಮಂಕು ಬೂದಿ ಸಾಧುಗಳಿಂದ ಮೋಸ ಹೋದುದು ಅರಿವಿಗೆ ಬಂದ ಹಿನ್ನೆಲೆಯಲ್ಲಿ ಆತ ಸಾಧುಗಳನ್ನು ಪ್ರಶ್ನಿಸಲು ಶುರು ಮಾಡುತ್ತಾನೆ. ಇದರಿಂದ ಗಾಬರಿಯಾದ ಸಾಧುಗಳು ತಮ್ಮ ಕಾರು ಸ್ಟಾರ್ಟ್ ಮಾಡಿಕೊಂಡು ಶೃಂಗೇರಿಯತ್ತ ಪ್ರಯಾಣ ಮಾಡುತ್ತಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಮಂಕು ಬೂದಿ ಸಾಧುಗಳನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಅಲ್ಲಿ ಪೊಲೀಸರು ತನಿಖೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅವರು ಸೀದಾ ಎಲ್ಲಿಯೂ ಸ್ಥಳೀಯವಾಗಿ ನಿಲ್ಲದೆ, ನೇರವಾಗಿ ತಮ್ಮ ಸ್ವ ಸ್ಥಾನ ಗುಜರಾತ್ ಗೆ ಹೋಗಲು ತಿಳಿಸಲಾಗಿದೆ ಎನ್ನುವ ಸುದ್ದಿ ವರದಿಯಾಗಿದೆ. ಮಂಕು ಬೂದಿ ನೆಪದಲ್ಲಿ ಯಾವ ಕೆಮಿಕಲ್ ಬಳಸಿ ಭ್ರಮೆ ಮೂಡಿಸಿ ದುಡ್ಡು ಬಾಚಿದರು ಎನ್ನುವ ಬಗ್ಗೆ ಸರಿಯಾಗಿ ತನಿಖೆ ನಡೆಸದೆ ಆರೋಪಿಗಳನ್ನು ಬಿಟ್ಟು ಕಳಿಸಿದ ಪೊಲೀಸ್ ನಡೆಯ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget