ನ್ಯೂಸ್ ನಾಟೌಟ್: ಆಸ್ತಿ ಕಬಳಿಕೆ ಉದ್ದೇಶದಿಂದ ವೀಲುನಾಮೆ ಯಾನೆ ಮರಣ ಶಾಸನ ದಾಖಲೆಯನ್ನು ಸೃಷ್ಟಿಸಿ, ವಂಚನೆ, ವಿಶ್ವಾಸದ್ರೋಹ, ಪ್ರಾಣ ಬೆದರಿಕೆ ಹಾಗೂ ಸುಲಿಗೆ ಮಾಡಿರುವ ಆರೋಪದಲ್ಲಿ ವ್ಯಕ್ತಿ ತನ್ನ ಸಹೋದರರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳದ ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ(51) ಎಂಬವರು ತನ್ನ ಸಹೋದರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಹೋದರರು ಜೊತೆ ಗೂಡಿ ನನಗೆ ಮದ್ಯಪಾನ ಮಾಡಿಸಿ, ಮನವೊಲಿಸಿ ಬರಿಮಾರು ಗ್ರಾಮದ ಸರ್ವೇ ನಂಬರ್ 51/5ರಲ್ಲಿ 2.78 ಎಕ್ರೆ ವಿಸ್ತೀರ್ಣದ ಜಮೀನನ್ನು ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರೆಡ್ ವೀಲುನಾಮೆ ಯಾನೆ ಮರಣ ಶಾಸನ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆನಂತರ ಪ್ರತಿದಿನ ಸಂಜೆ ಶರಾಬು ಹಾಗೂ ಮಾಂಸ ನೀಡಿ ಅಮಲಿನ ದಾಸನಾಗುವಂತೆ ಮಾಡಿ, ಮೂಲ ವೀಲುನಾಮೆಯನ್ನು ಬಲಾತ್ಕಾರವಾಗಿ ಇಟ್ಟುಕೊಂಡಿದ್ದಾರೆ. ಸಹೋದರರ ಕೈಗೆ ರಿಜಿಸ್ಟ್ರೆಡ್ ವೀಲುನಾಮೆಯ ಮೂಲ ಪ್ರತಿ ದೊರಕಿದ ನಂತರ ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಉಡುಪಿಯ “ಇಮ್ಮಾನ್ಯುಯೆಲ್ ಟ್ರಸ್ಟ್” ಎಂಬ ಹೆಸರಿನ ಆಶ್ರಮಕ್ಕೆ ಬಲಾತ್ಕಾರವಾಗಿ ಸೇರಿಸಿ ಉಳಿತಾಯ ಖಾತೆಯಿಂದ ಎಟಿಎಂ ಮುಖಾಂತರ ಹಂತ ಹಂತವಾಗಿ 1.50 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಶ್ರಮದಲ್ಲಿ ಸಹೋದರರು ತಮ್ಮ ಪ್ರಭಾವದ ಮೂಲಕ ಹುಚ್ಚನೆಂಬ ಹಣೆಪಟ್ಟಿ ಕಟ್ಟಲು 8 ತಿಂಗಳು ಕೋಣೆಯಲ್ಲಿ ಬಲಾತ್ಕಾರವಾಗಿ ಕೂಡಿಹಾಕಿ, ಶೌಚಾಲಯದ ನೀರನ್ನು ಕುಡಿಸಿ ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರವೂ ಅಪರಿಚಿತ ಗೂಂಡಾಗಳ ಸಹಾಯದಿಂದ ಪಂಪ್ ವೆಲ್ ಬಳಿ ಇರುವ ಆಶ್ರಮದಲ್ಲಿ ಕೂಡಿ ಹಾಕಿದ್ದರು. ಅಲ್ಲಿಂದಲೂ ತಪ್ಪಿಸಿ ಬಂದಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನನಗೆ ಮನೆಯೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ ಹಾಗೂ ಮನೆ ಮತ್ತು ಜಾಗವನ್ನು ತಮ್ಮ ಸ್ವಾಧೀನದಲ್ಲಿ ಬಲಾತ್ಕಾರವಾಗಿ ಇಟ್ಟುಕೊಂಡಿದ್ದಾರೆ. ತನ್ನ ಜಮೀನಿನಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆದ 45 ಕ್ವಿಂಟಲ್ ಗಳಿಗಿಂತಲೂ ಅಧಿಕ ಅಡಿಕೆಯನ್ನು ಮಾರಾಟ ಮಾಡಿ ಯಾವುದೇ ಹಣ ನೀಡದೆ ಬಿಕ್ಷಾಟನೆ ಮಾಡುವಂತೆ ಮಾಡಿದ್ದಾರೆ. 15 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ನನ್ನ ಹಣದಿಂದ ಅಣ್ಣ ಕಾರು ಹಾಗೂ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಕೊಲೆಯಾದಲ್ಲಿ ಸಹೋದರರೇ ಹೊಣೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆ ಆಗುತ್ತಿದ್ದ ವೇಳೆ ಪತಿಗೆ ಮಂಟಪದಲ್ಲೇ ಚಪ್ಪಲಿಯಲ್ಲಿ ಹೊಡೆದ ಪತ್ನಿ..! ಮುಂದೇನಾಯ್ತು..?