ನ್ಯೂಸ್ ನಾಟೌಟ್:ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ರಹಿಮಾನ್ ಅವರು ಯಾರ ತಂಟೆಗೂ ಹೋದವನಲ್ಲ ಎಂದು ತಂದೆ ಅಬ್ದುಲ್ ಖಾದರ್ ಅವರು ನೋವಿನ ನುಡಿಗಳನ್ನಾಡಿದ್ದಾರೆ. ಆತನಿಗೆ ಮನೆ ಕಟ್ಟುವ ಕನಸು ಇತ್ತು.ಇನ್ನೇನು ಪರಿಪೂರ್ಣ ಆಗುವಷ್ಟರಲ್ಲಿ ಹೀಗಾಗಿದೆ ಎಂದು ಕಣ್ಣೀರಾಗಿದ್ದಾರೆ. ಸದ್ಯ ರಹಿಮಾನ್ ಕನಸಿನ ಮನೆಯ ಫೋಟೋ ಲಭ್ಯವಾಗಿದ್ದು,ಆ ಮನೆಯನ್ನು ಶೀಘ್ರವೇ ಪೂರ್ಣಗೊಳಿಸಿ ಹೊಸ ಮನೆಯಲ್ಲಿ ಜೀವನ ಸಾಗಿಸುವ ಕನಸ್ಸು ಹೊತ್ತಿದ್ದರು.ಆದರೆ ಅವರ ಕನಸು ನನಸಾಗುವ ಮೊದಲೇ ಈ ದುರಂತ ನಡೆದಿದೆ.
ಇನ್ನು ರಹಿಮಾನ್ ಬಗ್ಗೆ ಸ್ಥಳೀಯರು ಹೇಳುವ ಪ್ರಕಾರ, ರಹಿಮಾನ್ ಒಬ್ಬ ಶ್ರಮಜೀವಿ. ಸ್ಥಳೀಯವಾಗಿ ಎಲ್ಲರೊಂದಿಗೆ ಆತ್ಮೀಯರಾಗಿದ್ದರು. ಅವರಿಗೆ ಪತ್ನಿ, 3 ವರ್ಷ ಹಾಗೂ 1 ವರ್ಷ 8 ತಿಂಗಳ ಮಗು ಇದೆ.ನನ್ನ ಮಗ(ಬಾಲೆ) ಯಾರ ವಿಷಯಕ್ಕೂ ಹೋಗುವ ವನಲ್ಲ, ಬೆಳಗ್ಗೆ ಕೆಲಸಕ್ಕೆ ಹೋಗಿದ್ದ. ಮಧ್ಯಾಹ್ನ 3ರ ಸುಮಾರಿಗೆ ಮನೆ ಮುಂದೆ ಪಿಕ್ಅಪ್ ಚಲಾಯಿಸಿಕೊಂಡು ಹೋಗಿದ್ದನ್ನು ಕಂಡಿದ್ದೆ. ಆಮೇಲೆ… ಅವನೇ ಇಲ್ಲ. ಮಗನನ್ನು ಕಳೆದುಕೊಂಡು ಯಾಕೆ ಬದುಕ ಬೇಕು, ಅನಾರೋಗ್ಯದಲ್ಲಿರುವ ನಮಗೆ ಔಷಧ ತಂದುಕೊಡುವವರು ಯಾರು ಎಂದು ಅವರು ಅಳಲನ್ನು ತೋಡಿಕೊಂಡಿ ರಹಿಮಾನ್ ತಂದೆ ಅಬ್ದುಲ್ ಖಾದರ್.
ಆತ ಯಾವ ಪ್ರಕರಣದಲ್ಲಿಯೂ ಇಲ್ಲ, ಯಾವ ಪೊಲೀಸ್ ಠಾಣೆಯಲ್ಲೂ ಅವನ ಹೆಸರಿಲ್ಲ. ಹೀಗಿದ್ದರೂ ಆತನನ್ನು ಹತ್ಯೆ ಮಾಡಿರುವ ಹಿಂದೆ ದೊಡ್ಡ ಪಿತೂರಿ ಇದ್ದು, ಹೀಗಾಗಿ ಪ್ರಕರಣವನ್ನು ಎನ್ಐಎಗೆ ವಹಿಸಬೇಕು. ಜತೆಗೆ ಮೃತರ ಕುಟುಂಬಕ್ಕೆ ಸರಕಾರ 1 ಕೋ.ರೂ.ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಎಸ್ಕೆಎಸ್ಎಸ್ಎಫ್ ಮಂಗಳೂರು ವಲಯ ಉಪಾಧ್ಯಕ್ಷ ಅಬ್ದುಲ್ ರಶೀದ್ ಹನೀಫಿ ಒತ್ತಾಯಿಸಿದ್ದಾರೆ.