ನ್ಯೂಸ್ ನಾಟೌಟ್: ಸರಕಾರದ ಗೃಹಲಕ್ಷ್ಮೀ ಯೋಜನೆ ಅನೇಕ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿದೆ. ಈ ಹಣದ ಮೂಲಕ ಮಹಿಳೆಯರು ಸಾಕಷ್ಟು ಪ್ರಯೋಜನಗಳನ್ನು ಕಂಡಿದ್ದಾರೆ. ಆದರೆ ವಿಚಿತ್ರ ಕೇಸ್ ಎಂಬಂತೆ ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಹಿಡಿದಿಟ್ಟ ವಿಚಾರ ಕೊಳ್ನಾಡು ಗ್ರಾಮಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ.ಕೊಳ್ನಾಡು ಗ್ರಾಮಸಭೆ ಆರಂಭವಾದ ಕೆಲಹೊತ್ತಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲೆತ್ತೂರು ಶಾಖೆಯ ಮ್ಯಾನೇಜರ್ ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ಕೊಟ್ಟಿದ್ದು ಕೆಲ ಕಾಲ ಗೊಂದಲ ಸೃಷ್ಟಿಯಾಗಿದೆ.
ಸಾಲೆತ್ತೂರಿನ ಕೊಳ್ನಾಡು ಗ್ರಾಮದ ಕಲ್ಲಮಜಲು ನಿವಾಸಿ ದೃಷ್ಟಿ ಹೀನ ಮಹಿಳೆ ನೆಬಿಸ ಮಹಮ್ಮದ್ ಅವರಿಗೆ ಸರಕಾರದ ಗೃಹಲಕ್ಷ್ಮೀ ಹಣ ಸೇರಿದಂತೆ ದೃಷ್ಟಿ ಹೀನತೆಗಾಗಿ ಸರಕಾರದಿಂದ ಪಿಂಚಣಿ ಹಣವೂ ಸಿಗುತ್ತಿತ್ತು. ಈ ಹಿನ್ನಲೆಯಲ್ಲಿ ಅವರು ಹಣಕ್ಕಾಗಿ ಬ್ಯಾಂಕ್ ನತ್ತ ಹೆಜ್ಜೆ ಹಾಕಿದ್ದಾರೆ. ಹೀಗೆ ಹೋದವರಿಗೆ ಶಾಕ್ ಆಗಿದೆ. ಕಾರಣ ಪುತ್ರನ ಸಾಲ. ಹೌದು, ಇವರ ಪುತ್ರ ಈ ಶಾಖೆಯಿಂದ ವೈಯಕ್ತಿಕ ಸಾಲ ಪಡೆದಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಸಾಲದ ಕಂತು ವಿಳಂಬವಾಗಿತ್ತು.ಆದರೆ ಇವರ ತಾಯಿ ನೆಬಿಸ ತನ್ನ ಖಾತೆಗೆ ಜಮಾ ಆಗಿರುವ ಗೃಹಲಕ್ಷ್ಮಿ ಹಣ ಮತ್ತು ದೃಷ್ಟಿ ಹೀನ ಬಗ್ಗೆ ಸರ್ಕಾರದಿಂದ ಸಿಗುವ ಪಿಂಚಣಿ ಹಣ ನಗದೀಕರಿಸಲು ಮೂರು ಬಾರಿ ಹೋಗಿದ್ದಾರೆ. ಆದರೆ ಇವರಿಗೆ ಹಣ ಸಿಕ್ಕಿರಲಿಲ್ಲ. ಇದಕ್ಕೆ ಕಾರಣ ಪುತ್ರನ ಸಾಲ ಬಾಕಿಯಾಗಿದ್ದು.ನಿಮ್ಮ ಪುತ್ರನ ಸಾಲ ಬಾಕಿಯಾಗಿದ್ದು, ಖಾತೆಯಿಂದ ಹಣ ನಗದೀಕರಿಸಲು ಆಗುವುದಿಲ್ಲ ಎಂಬ ಕಾರಣವನ್ನು ಮ್ಯಾನೇಜರ್ ಹೇಳಿದ್ದು, ಮಹಿಳೆಯನ್ನು ಹಿಂದಕ್ಕೆ ಕಳಿಸುವಂತೆ ಮಾಡಿದ್ದಾರೆ.
ಗ್ರಾಮ ಸಭೆಯಲ್ಲಿ ಹಾಜರಿದ್ದ ನೆಬಿಸ ಈ ವಿಚಾರವನ್ನು ಗ್ರಾಮಸ್ಥರ ಮೂಲಕ ಸಭೆಯಲ್ಲಿ ತಿಳಿಸಿದ್ದಾರೆ. ಎದ್ದು ನಿಂತು ಸಮಸ್ಯೆ ಬಗ್ಗೆ ಹೇಳಿ ಕಣ್ಣೀರಾಗಿದ್ದಾರೆ.ಅಲ್ಲಿವರೆಗೆ ಉಡಾಫೆಯಾಗಿ ಮಾತನಾಡುತ್ತಿದ್ದ ಮ್ಯಾನೇಜರ್ ಗೆ ಬೇರೆ ಉಪಾಯವೇ ಇರಲಿಲ್ಲ.ಈ ಮಹಿಳೆಯ ಕಣ್ಣೀರ ಮಾತು ಕೇಳಿ ಅಲ್ಲಿ ನೆರೆದ ಗ್ರಾಮಸ್ಥರ ಮನಸ್ಸು ಕರಗಿದೆ. ಅರ್ಧ ಗಂಟೆ ಕಾಲ ಬ್ಯಾಂಕ್ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ವಿಧಿಯಿಲ್ಲದೇ ತನ್ನ ತಪ್ಪನ್ನು ಮ್ಯಾನೇಜರ್ ಒಪ್ಪಿ ಕೊಂಡಿದ್ದಾರೆ ಎನ್ನಲಾಗಿದೆ.
ಕೂಡಲೇ ಸಭೆಯಿಂದಲೇ ಹೊರನಡೆದು ಮಹಿಳೆಯನ್ನು ಬ್ಯಾಂಕಿಗೆ ಬರೋದಕ್ಕೆ ತಿಳಿಸಿದ್ದಾರೆ. ಬಳಿಕ ಖಾತೆಯಲ್ಲಿದ್ದ 8,500 ರು. ನಗದು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಹಣ ಪಡೆದು ಬಂದ ಖಾತೆದಾರ ನೆಬಿಸ ಅವರು ಗ್ರಾಮಸಭೆಗೆ ಅಭಿನಂದನೆ ಸಲ್ಲಿಸಿದ್ದಾರೆ.