ನ್ಯೂಸ್ ನಾಟೌಟ್: ಪೊಲೀಸ್ ಠಾಣೆಯಲ್ಲಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ ಪೊಲೀಸರು ಸಮಾಜಕ್ಕೆ ಮಾದರಿಯಾಗಿದ್ದಾರೆ.ನಾಪೊಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸೇರಿ ಮಹಿಳಾ ಸಹೋದ್ಯೋಗಿಯ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಸಿಬ್ಬಂದಿಯಾದ ಸಿ.ಪಿ.ಪೂರ್ಣಿಮಾ ಅವರ ಸೀಮಂತ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಬಳೆ, ಕುಂಕುಮ, ವಸ್ತ್ರ, ವಿವಿಧ ಬಗೆಯ ತಿಂಡಿ ತಿನಿಸುಗಳು, ಹಣ್ಣು ಹಂಪಲು, ತಾಂಬೂಲವನ್ನಿಟ್ಟ ಶಾಸ್ತ್ರೋಕ್ತದ ಮೂಲಕ ಮಹಿಳೆಯ ಉತ್ತಮ ಕೌಟುಂಬಿಕ ಜೀವನ ನಿರ್ವಹಣೆಗಾಗಿ ಸಿಬ್ಬಂದಿ ಶುಭ ಹಾರೈಸಿದ್ದಾರೆ.
ಠಾಣಾಧಿಕಾರಿ ಮಂಜುನಾಥ ಮಾತನಾಡಿ, ಮಹಿಳೆಯ ಜೀವನದಲ್ಲಿ ನವ ಮಾಸಗಳು ಒಂದು ಪ್ರಮುಖ ಘಟ್ಟ. ತಾಯಿಯಾಗಿ ಜೀವನ ನಿರ್ವಹಣೆ ಮಾಡಬೇಕಾದಲ್ಲಿ ಆಕೆಗೆ ದೇವರ ಅನುಗ್ರಹವು ಮುಖ್ಯ ಹಾಗೂ ನಮ್ಮೆಲ್ಲರ ಹಾರೈಕೆ ಅಗತ್ಯ. ಈ ನಿಟ್ಟಿನಲ್ಲಿ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ದೇವರು ಸಿಬ್ಬಂದಿಗೆ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹಾರೈಸಿದರು.ಈ ಸಂದರ್ಭ ಠಾಣೆಯ ಎಲ್ಲ ಸಿಬ್ಬಂದಿ ವರ್ಗ ಹಾಜರಿದ್ದರು.