ನ್ಯೂಸ್ ನಾಟೌಟ್: ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಳ್ಳಸಾಗಣೆಯಾದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು (License) ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಅಲ್ಲದೇ ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ರಾಜ್ಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೋರ್ಟ್ ನೀಡಿದೆ.
ಉತ್ತರಪ್ರದೇಶದ ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾ.ಜೆ.ಬಿ ಪಾರ್ದ್ರಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಈ ನಿರ್ದೇಶನಗಳನ್ನು ನೀಡಿದೆ. ಈ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಅಲಹಾಬಾದ್ ಹೈಕೋರ್ಟ್ ಮತ್ತು ಉತ್ತರಪ್ರದೇಶ ಸರ್ಕಾರ ಎರಡನ್ನೂ ಸುಪ್ರೀಂ ಕೋರ್ಟ್ ಇಂದು(ಎ.15) ತರಾಟೆಗೆ ತೆಗೆದುಕೊಂಡಿತು.
ಬಳಿಕ ಈ ಬಗ್ಗೆ ನಿರ್ದೇಶನಗಳನ್ನು ನೀಡಿದ ಪೀಠ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಕೆಳ ನ್ಯಾಯಾಲಯಗಳಿಗೆ ನಿರ್ದೇಶನಗಳನ್ನು ನೀಡುವಂತೆ ದೇಶಾದ್ಯಂತದ ಹೈಕೋರ್ಟ್ ಗಳಿಗೆ ನಿರ್ದೇಶನ ನೀಡಿದೆ.
ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ನಿರ್ಲಕ್ಷ್ಯ ತೋರಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ನ್ಯಾಯಾಲಯದ ತಿರಸ್ಕಾರವೆಂದು ಪರಿಗಣಿಸಲಾಗುತ್ತದೆ ಎಂದು ಪೀಠ ತಿಳಿಸಿದೆ. ರಾಜ್ಯ ಸರ್ಕಾರಗಳು ನಮ್ಮ ವಿವರವಾದ ಶಿಫಾರಸುಗಳನ್ನು ಪರಿಶೀಲಿಸಿ, ಭಾರತೀಯ ಸಂಸ್ಥೆ ಸಲ್ಲಿಸಿದ ವರದಿಯನ್ನು ಅಧ್ಯಯನ ಮಾಡಿ, ಆದಷ್ಟು ಬೇಗ ಅದನ್ನು ಜಾರಿಗೆ ತರಬೇಕು. ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಕಿ ಇರುವ ವಿಚಾರಣೆಯ ಸ್ಥಿತಿಗತಿಯನ್ನು ತಿಳಿಸಲು ದೇಶಾದ್ಯಂತದ ಹೈಕೋರ್ಟ್ ಗಳಿಗೆ ನಿರ್ದೇಶನ ನೀಡಲಾಗಿದೆ. 6 ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ದಿನನಿತ್ಯದ ವಿಚಾರಣೆಯನ್ನು ನಡೆಸಲು ನಿರ್ದೇಶನಗಳನ್ನು ನೀಡಬೇಕು ಎಂದು ಪೀಠ ಆದೇಶಿಸಿದೆ.