ನ್ಯೂಸ್ ನಾಟೌಟ್: ಮದುವೆಯಾಗೋ ವಯಸ್ಸಿಗೆ ಬಂದಿರುವ ಯುವಕನೋರ್ವ ತನಗಿನ್ನು ಮದುವೆಯಾಗಿಲ್ಲ ಎಂದು ಹೇಳಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯ ಕೆ.ಬೋಯಿಕೇರಿಯಲ್ಲಿ ನಡೆದಿದೆ.ಮೃತನನ್ನು ಮಡಿಕೇರಿ ತಾಲೂಕು ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿ ಬಿ.ಪಿ.ಅನಿಲ್ ಕುಮಾರ್ ಅಲಿಯಾಸ್ ಸತೀಶ್ (40) ಎಂದು ಗುರುತಿಸಲಾಗಿದೆ.
ಕುಟುಂಬ ನಿರ್ವಹಣೆಗಾಗಿ ಕೆಲಸ ಅರಸಿಕೊಂಡು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಮರದ ಆಚಾರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತನಿಗೆ ಓರ್ವ ಸಹೋದರನಿದ್ದು ಸಹೋದರರ ಮಧ್ಯೆ ಅನ್ಯೋನ್ಯ ಸಂಬಂಧವಿತ್ತು. ಹಿರಿಯಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೆ ವಯಸ್ಸು 40 ಆಗಿದ್ದರೂ ಕೂಡ ಈತನಿಗೆ ಮದುವೆಯಾಗಿಲ್ಲ ಎನ್ನುವ ಕೊರಗು ಕಾಡುತ್ತಿತ್ತು. ಇದರಿಂದ ಸತೀಶ್ ಕೂಡ ಆಗಾಗ ಸಾಯುವ ವಿಚಾರವಾಗಿ ಮಾತನಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆದಿತ್ಯವಾರ ರಾತ್ರಿ ಸುಮಾರು 9:30ರ ವೇಳೆ ಎಂದಿನಂತೆ ಮನೆಗೆ ಬಂದಿದ್ದ ಸತೀಶ್ ಕೈಕಾಲು ತೊಳೆದು ಊಟಕ್ಕೆ ಸಿದ್ಧನಾಗಿದ್ದ. ಆದರೆ ಅಣ್ಣ ಮತ್ತು ತಾಯಿ ಇದ್ದರೂ ಕೂಡ ಏಕಾಏಕಿ ಎದ್ದು ಕೋಣೆಯೊಳಗೆ ಹೋದ. ಒಳಗೆ ಹೋಗಿ ಕೋಣೆಯಲ್ಲಿದ್ದ ಕೋವಿಯಿಂದ ತಲೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಣಾಮ ತಲೆ ಭಾಗ ಛಿದ್ರವಾಗಿದೆ ಎಂದು ಹೇಳಲಾಗಿದೆ.ರಾತ್ರಿ 09:45 ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ಬಂದಿದ್ದು, ಮೃತನ ಅಣ್ಣ ಬೆಳ್ಯಪ್ಪ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮೃತದೇಹವನ್ನು ಮಡಿಕೇರಿ ಶವಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.