ನ್ಯೂಸ್ ನಾಟೌಟ್: ‘ಪಾಪಿ ಕಲಿಯುಗದಲ್ಲಿ ಎಲ್ಲವೂ ಮೋಸ ಮಾರಾಯಾ..’ ಅಂತ ನಮ್ಮ ಜನ ಗೊಣಗುವುದನ್ನು ನೋಡಿದ್ದೇವೆ. ಈ ಮಾತು ಹೌದು ಅನ್ನುವಂತೆ ಘಟನೆಗಳು ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪ್ರಾಮಾಣಿಕತೆ ಅನ್ನುವುದೇ ಮರೆಯಾಗುತ್ತಿದೆ. ಸ್ವಾರ್ಥ, ಅಸೂಯೇ ಮೇಳೈಸುತ್ತಿದೆ. ಈ ಕಾರಣಕ್ಕೆ ಜನ ಹೀಗೆ ಮಾತನಾಡುತ್ತಿರಬಹುದು. ಆದರೆ ಈ ನಡುವೆ ಅಲ್ಲಿ ಇಲ್ಲಿ ಎಲ್ಲೋ ಒಬ್ಬರು ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ. ಅಂಥಹವರ ಪೈಕಿ ಸುಳ್ಯದ ಆಟೋ ಚಾಲಕರು ಕೂಡ ಒಬ್ಬರು ಅನ್ನುವುದು ವಿಶೇಷ.
ತನ್ನ ಆಟೋದಲ್ಲಿ ಬಿದ್ದು ಸಿಕ್ಕಿದ ಸುಮಾರು 1 ಲಕ್ಷ 10 ಸಾವಿರಕ್ಕೂ ಅಧಿಕ ಬೆಲೆ ಬಾಳುವ 12 ಗ್ರಾಂ. ತೂಕದ ಚಿನ್ನದ ಆಭರಣವನ್ನು ವಾರಿಸುದಾರರಿಗೆ ವಾಪಸ್ ನೀಡುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಒಳ್ಳೆಯತನ ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ ಅನ್ನುವುದನ್ನು ನಿರೂಪಿಸಿ ತೋರಿಸಿದ್ದಾರೆ.
ಏನಿದು ಘಟನೆ..?
ಕೆವಿಜಿ ಆಟೋ ಪಾರ್ಕಿಂಗ್ ನಲ್ಲಿ ರತ್ನಾಕರ ಅಡ್ಪಂಗಾಯ ಅನ್ನುವವರು ಕಳೆದ ಕೆಲವು ವರ್ಷಗಳಿಂದ ಆಟೋ ಚಾಲಕರಾಗಿ ವೃತ್ತಿ ಮಾಡುತ್ತಿದ್ದಾರೆ. ಇವರ ಆಟೋದಲ್ಲಿ ಪರಿವಾರಕಾನದ ನೌಫಲ್ ಅನ್ನುವವರ ಮಗಳು ಪ್ರಯಾಣಿಸುತ್ತಿದ್ದಾಗ ಚಿನ್ನದ ಆಭರಣ ಕೆಳಕ್ಕೆ ಬಿದ್ದಿತ್ತು. ಇದು ಯಾರಿಗೂ ಗೊತ್ತಾಗಿರಲಿಲ್ಲ. ಈ ಬಗ್ಗೆ ನೌಫಲ್ ಆಟೋದವರಲ್ಲಿ ವಿಚಾರಿಸಿದಾಗ ಅವರು ತಮ್ಮ ಆಟೋವನ್ನು ಹುಡುಕಿದ್ದಾರೆ. ಈ ಸರ ಅದರಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಹೌದು , ಈ ಸರ ನಮ್ಮ ಆಟೋದಲ್ಲೇ ಇದೆ, ಬಂದು ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ. ಹಾಗೆ ನೌಫಲ್ ಅವರು ಬಂದು ಚಿನ್ನದ ಸರವನ್ನು ರತ್ನಾಕರ ಅವರಿಂದ ಪಡೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಆಟೋ ಚಾಲಕರೆಂದರೆ ಹೆಚ್ಚಿನವರು ಬಡವರು. ದಿನದ ಒಂದು ಹೊತ್ತಿನ ಕುಟುಂಬ ನಿರ್ವಹಣೆಗಾಗಿ ಪರದಾಟ ನಡೆಸುತ್ತಿರುತ್ತಾರೆ. ಅಂತಹ ಆಟೋ ಚಾಲಕರು ತಮ್ಮ ಬಳಿ ಹಣವಿಲ್ಲದಿದ್ದರೂ ಪ್ರಾಮಾಣಿಕ ಜೀವನ ನಡೆಸುತ್ತಿರುತ್ತಾರೆ. ತಾವು ಎಷ್ಟೇ ಕಷ್ಟದಲ್ಲಿದ್ದರೂ ಇನ್ನೊಬ್ಬರ ಹಣ, ಚಿನ್ನ ಅಥವಾ ಬೆಲೆ ಬಾಳುವ ಯಾವುದೇ ವಸ್ತುವಾಗಿದ್ದರೂ ಅದನ್ನು ವಾಪಸ್ ನೀಡುವ ಮನಸ್ಸು ಮಾಡುತ್ತಾರೆ. ಒಬ್ಬ ಸ್ವಾಭಿಮಾನಿ ಶ್ರಮ ಜೀವಿಗೆ ಮಾತ್ರ ಹೀಗೆ ಮಾಡಲು ಸಾಧ್ಯವೆಂದರೆ ತಪ್ಪಾಗಲಾರದು. ಸದ್ಯ ರತ್ನಾಕರ ಅಡ್ಪಂಗಾಯ ಅವರ ಪ್ರಮಾಣಿಕ ಕಾರ್ಯ ಇಡೀ ಸಮಾಜಕ್ಕೆ ಮಾದರಿ.