ನ್ಯೂಸ್ ನಾಟೌಟ್: ವೃದ್ಧಾಪ್ಯದ ಅಂಚಿನಲ್ಲಿರುವ ತಂದೆ ತಾಯಿ ಸ್ಥಿತಿವಂತರಾಗಿದ್ದರು. ಈ ನಡುವೆ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಬಂದಿತ್ತು. ತಾಯಿ ತಾನೇ ನಡೆಸುತ್ತಿದ್ದ ಉದ್ಯಮದಲ್ಲಿ ಅವಘಡವಾಗಿ ಒಂದು ಕೈ ಕಳೆದುಕೊಂಡಿದ್ದರು. ಆದರೆ, ಇಂತ ಹೊತ್ತಲ್ಲಿ ಅವರ ಜೊತೆಗಿರಬೇಕಾದ ಮಗ ಕ್ರೂರವಾಗಿ ವರ್ತಿಸಿದ್ದಾನೆ. ಆಸ್ತಿಗಾಗಿ ತಂದೆ ತಾಯಿಗೆ ಕಿರುಕುಳ ಕೊಟ್ಟು ಮನೆಯಿಂದ ಹೊರಹೋಗುವಂತೆ ಮಾಡಿದ್ದಾನೆ.
ಇದೀಗ ಆ ನೊಂದ ತಂದೆ ತಾಯಿ ಆಶ್ರಯಕ್ಕಾಗಿ ಎಸಿ ಕಚೇರಿಯ ಮೆಟ್ಟೇಲೇರಿದ್ದಾರೆ. ಇಂಥದ್ದೊಂದು ಘಟನೆ ಚಿತ್ರದುರ್ಗ ಭರಮಸಾಗರದಲ್ಲಿ ನಡೆದಿದೆ.
ಭರಮಸಾಗರ ನಿವಾಸಿಗಳಾದ ಶಾಂತವೀರಪ್ಪ ಹಾಗೂ ಪುಷ್ಪಾ ಎಂಬ ವೃದ್ಧ ದಂಪತಿ ಮಗನಿಂದ ಕಿರುಕುಳಕ್ಕೆ ಒಳಗಾಗಿ ಮನೆ ಬಿಟ್ಟು ಆಚೆ ಬಂದಿದ್ದಾರೆ. ಪುತ್ರ ವಿವೇಕಾನಂದ ಎಂಬಾತ ಅವಿವೇಕಿತನದಿಂದ ಪಾಪಿಯಂತೇ ವರ್ತಿಸಿದ್ದಾನೆ.
ಶಾಂತವೀರಪ್ಪ ಮಗನಿಗೆ ಅಂತಾನೇ ಸಾಕಷ್ಟು ಆಸ್ತಿ ಪಾಸ್ತಿ ಮಾಡಿದ್ದಾರೆ. ಅವರ ಪತ್ನಿ ಕೂಡ ಇಂಡಸ್ಟ್ರಿ ನಡೆಸುತ್ತಿದ್ದು, ಹಲವು ಮಹಿಳೆಯರಿಗೆ ಕೆಲಸ ಕೊಟ್ಟಿದ್ದರು. ಇದೀಗ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಾಂತವೀರಪ್ಪ ಹಾರ್ಟ್ ಆಪರೇಷನ್ ಗೆ ಒಳಗಾಗಿದ್ದಾರೆ. ಅತ್ತ ತನ್ನದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಅವಘಡದಲ್ಲಿ ಪುಷ್ಪಾ ಒಂದು ಕೈ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಪುತ್ರ ಇಬ್ಬರನ್ನೂ ಮನೆಯಿಂದ ಆಚೆ ಹಾಕಿದ್ದಾನೆ.
ಭರಮಸಾಗರದಲ್ಲಿ LIC ಇಂದ ಸಾಲ ಪಡೆದು ಮನೆ ಹಾಗೂ ಕಾಂಪ್ಲೆಕ್ಸ್ ಕಟ್ಟಿದ್ದಾರೆ. ಇನ್ನೇನು ಗೃಹಪ್ರವೇಶ ಆಗಬೇಕು ಎನ್ನುವ ಹೊತ್ತಿನಲ್ಲಿ ಮಗ ಕಿರುಕುಳ ಕೊಡಲು ಆರಂಭಿಸಿದ್ದಾನೆ.
ನನ್ನ ಹಸರಿಗೆ ಮನೆ ಮಾಡಿದರೆ ಮಾತ್ರ ಗೃಹ ಪ್ರವೇಶ ಎಂದು ವಿವೇಕಾನಂದ ಪಟ್ಟು ಹಿಡಿದಿದ್ದಾನಂತೆ. ಅದಕ್ಕೆ ಒಪ್ಪದ ತಂದೆ, ತಾಯಿ ಎಸಿ ಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ ಎಸಿ, ತಂದೆ ತಾಯಿಗೆ ಆಸ್ತಿ ಬಿಟ್ಟುಕೊಡುವಂತೆ ಆದೇಶ ನೀಡಿದ್ದಾರೆ. ಆದರೆ ಆದೇಶ ಧಿಕ್ಕರಿಸಿ, ಬಳಿಕ ವೃದ್ಧ ತಂದೆ-ತಾಯಿಗೆ ಆಸ್ತಿಯೂ ಕೊಡದೆ, ಮನೆಯಲ್ಲಿ ಆಶ್ರಯವನ್ನೂ ಕೊಡದೇ ಪಾಪಿ ಪುತ್ರ ಕಿರುಕುಳ ನೀಡಿದ್ದಾನೆ ಎಂದು ವರದಿ ತಿಳಿಸಿದೆ.