ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನಿಂದ ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಕೊಡ ಮಾಡುವ ರಾಜ್ಯಮಟ್ಟದ “ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಪನ್ಯಾಸಕಿ, ತರಬೇತುದಾರರು, ಸಂಘಟಕಿ ಹಾಗೂ ಬರಹಗಾರ್ತಿ ಸುಳ್ಯದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.
ಎನ್ ಎಸ್ ಎಸ್, ಸ್ಕೌಟ್- ಗೈಡ್, ಜೆಸಿಸ್, ರೆಡ್ ಕ್ರಾಸ್, ಮೊದಲಾದ ಸಂಸ್ಥೆಗಳಲ್ಲಿ ಹಲವು ಪ್ರಥಮಗಳೊಂದಿಗೆ ಶಾಶ್ವತ ದಾಖಲೆಗಳನ್ನು ನಿರ್ಮಿಸಿರುವ ಡಾ. ಅನುರಾಧಾ ಕುರುಂಜಿಯವರು ಶಿಕ್ಷಣದ ಜೊತೆಗೆ ಓರ್ವ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 2500ಕ್ಕೂ ಮಿಕ್ಕಿ ತರಬೇತಿ ನೀಡಿ ಸಾವಿರಾರು ವಿದ್ಯಾರ್ಥಿಗಳ, ಯುವಜನತೆಯ , ಸಮಾಜ ಬಾಂಧವರ ವ್ಯಕ್ತಿತ್ವ ವಿಕಸನಕ್ಕೆ ಕಾರಣಕರ್ತರಾದ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಡಿ. 28 ಮತ್ತು 29 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟಿ ಉಮಾಶ್ರೀ ಉಪಸ್ಥಿತಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ ಅನುರಾಧಾ ಕುರುಂಜಿಯವರು ಕುರುಂಜಿಯ ಪದ್ಮಯ್ಯ ಗೌಡ, ಸೀತಮ್ಮ ದಂಪತಿಯ ಪುತ್ರಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ನ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿ. ಇದೇ ಸಂದರ್ಭ ದ.ಕ ಜಿಲ್ಲೆಯಿಂದ ಡಾ ಮೋಹನ್ ಆಳ್ವರು ಜೀವಮಾನ ಸಾಧಕ ಪ್ರಶಸ್ತಿ ಸ್ವೀಕರಿಸಲಿದ್ದು, “ಮೋಹನ್ ಆಳ್ವರಂತಹ ಮಹಾನ್ ಚೇತನ, ಶಿಕ್ಷಣ ಕ್ಷೇತ್ರದ ಸಾಧಕರೊಂದಿಗೆ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯ ಸಂಗತಿ” ಎನ್ನುತ್ತಾರೆ. ಡಾ. ಅನುರಾಧಾ ಕುರುಂಜಿ.