ನ್ಯೂಸ್ ನಾಟೌಟ್: ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಹಲವಾರು ತಿಂಗಳಿನಿಂದ ಹಾಗೆಯೇ ಬಾಕಿ ಉಳಿದಿದ್ದ ಸಾರ್ವಜನಿಕ ಪುಟ್ ಪಾತ್ ಸರಿಪಡಿಸುವ ಕಾರ್ಯಕ್ಕೆ ನ್ಯೂಸ್ ನಾಟೌಟ್ ವರದಿಯ ಬೆನ್ನಲ್ಲೇ ಚಾಲನೆ ಸಿಕ್ಕಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ಕಾವೂರ್ ನೇತೃತ್ವದಲ್ಲಿ ಸ್ಥಳೀಯ ರಿಕ್ಷಾ ಚಾಲಕರ ಸಹಕಾರದೊಂದಿಗೆ ಪುಟ್ಪಾತ್ ಅನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಮುಗ್ರೋಡಿ ಕನ್ಸ್ಟ್ರಕ್ಷನ್ ಕಾವೂರ್ ಇಂಜಿನೀಯರ್ ಒಬ್ಬರು, ‘ವರದಿ ಬಂದ ಬಳಿಕ ನಮ್ಮ ಗಮನಕ್ಕೆ ಬಂತು. ತಕ್ಷಣ ನಾವು ಸಿಬ್ಬಂದಿ ಕರೆದುಕೊಂಡು ಬಂದು ತಾತ್ಕಾಲಿಕ ಪರಿಹಾರ ಮಾಡಿದ್ದೇವೆ. ನಾಳೆ (ಶನಿವಾರ_ ಕಂಪ್ಲೀಟ್ ಸ್ಲಾಬ್ ಮಾಡಿ ಜನರಿಗೆ ಅನುಕೂಲವಾಗುವಂತೆ ಮಾಡಿ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಎಂದು ತಿಳಿಸಿದರು.
ಯಮ ಸ್ವರೂಪಿಯಾಗಿ ಬಾಯ್ತೆರೆದು ಕೊಂಡು ಕುಳಿತಿರುವ ಮೋರಿಯೊಳಗೆ ಜಾರಿ ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಕಳೆದ ಕೆಲವು ತಿಂಗಳಿನಿಂದ ಈ ಸಮಸ್ಯೆ ನಡೆದಾಡುವ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ. ಈ ಮೋರಿಯೊಳಗೆ ಕಾಲು ಜಾರಿ ಕೆಲವರಿಗೆ ಗಾಯಗಳಾಗಿವೆ. ಶಾಲೆ ಮಕ್ಕಳು ಕೂಡ ಮೋರಿಯಿಂದಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅನಾಹುತ ಸಂಭವಿಸುತ್ತಿದ್ದರೂ ಈ ಬಗ್ಗೆ ಇದುವರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯೂಸ್ ನಾಟೌಟ್ ವಿಸ್ತಾರವಾಗಿ ವರದಿ ಪ್ರಕಟಿಸಿತ್ತು.