ನ್ಯೂಸ್ ನಾಟೌಟ್: ಅಡ್ಕಾರು ಬಳಿ ಭೀಕರ ಅಪಘಾತ ಸಂಭವಿಸಿ ರಕ್ತದೋಕುಳಿಯೇ ಹರಿದಿದೆ. ನಾಲ್ವರಲ್ಲಿ ಮೂವರು ಬಡ ಕಾರ್ಮಿಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಕಾರು ಚಾಲಕನ ಅತಿಯಾದ ವೇಗದಿಂದ ಭಾರಿ ದೊಡ್ಡ ಅನಾಹುತ ಸಂಭವಿಸಿದೆ. ನಂಬಿದ ಕುಟುಂಬಗಳು ಬೀದಿಗೆ ಬಿದ್ದಿವೆ. ಬದುಕುಳಿದ ವ್ಯಕ್ತಿ ತಮ್ಮ ಸ್ನೇಹಿತರ ಭೀಕರ ಸಾವನ್ನು ಕಣ್ಣಾರೆ ಕಂಡು ಇನ್ನೂ ಆ ಭಯದಿಂದ ಹೊರ ಬಂದಿಲ್ಲ.
ಸದ್ಯ ಗಂಭೀರ ಗಾಯಗೊಂಡ ವ್ಯಕ್ತಿ ಸುಳ್ಯದ ಕೆವಿಜಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಕಣ್ಣೆದುರು ನಡೆದಿರುವ ಭೀಕರ ಘಟನೆಯನ್ನು ಕಣ್ಣೀರಿಟ್ಟುಕೊಂಡೇ ವಿವರಿಸಿದ್ದಾರೆ. ಎಂಕಪ್ಪ (56 ವರ್ಷ) ನ್ಯೂಸ್ ನಾಟೌಟ್ ಜೊತೆಗೆ ಹಂಚಿಕೊಂಡಿರುವ ವಿಚಾರಗಳು ಇಲ್ಲಿದೆ ಓದಿ..
”ನಾವು ನಾಲ್ಕು ಮಂದಿ ಕೆಲಸ ಅರಸಿಕೊಂಡು ನಮ್ಮೂರು ಬ್ಯಾಡಗಿಯಿಂದ ಸುಳ್ಯದ ಅಡ್ಕಾರಿಗೆ ಬಂದಿದ್ದೆವು. ಬುಧವಾರ ರಾತ್ರಿ ಅಡ್ಕಾರಿನಲ್ಲಿ ಒಂದು ರೂಂ ಮಾಡಿಕೊಂಡು ಮಲಗಿದ್ದೆವು. ಬೆಳಗ್ಗೆ ಬೇಗ ಎದ್ದು ಕೆಲಸ ಹುಡುಕುವ ತರಾತುರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು.
ಈ ವೇಳೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಕಾರೊಂದು ನಿಯಂತ್ರಣ ತಪ್ಪಿ ನಮ್ಮ ಕಡೆಯೇ ಬಂತು. ಮರು ಕ್ಷಣದಲ್ಲಿ ಏನಾಯಿತು ಗೊತ್ತಿಲ್ಲ. ನನಗೆ ಮಾತ್ರ ಅರೆ ಪ್ರಜ್ಞೆ ಇತ್ತು. ಕಣ್ಣೆದುರಲ್ಲೇ ನನ್ನ ಮೂರು ಮಂದಿ ಸ್ನೇಹಿತರು ಪ್ರಜ್ಞೆ ಕಳೆದುಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರು. ಬಳಿಕ ಏನಾಯಿತೋ ಗೊತ್ತಿಲ್ಲ. ಪ್ರಜ್ಞೆ ತಪ್ಪಿತು. ಮತ್ತೆ ಪ್ರಜ್ಞೆ ಬಂದಾಗ ನಾನು ಆಸ್ಪತ್ರೆಯಲ್ಲಿದ್ದೆ. ದೇವರು ನನ್ನ ಸ್ನೇಹಿತರನ್ನು ನನ್ನಿಂದ ಕಿತ್ತುಕೊಂಡ.
ಅವರ ಮನೆಯಲ್ಲಿ ತುಂಬಾ ಕಷ್ಟ ಇದೆ. ಹೊಟ್ಟೆ ಪಾಡಿಗೆ ಬಂದ ನಮಗೆ ದೇವರು ಅನ್ಯಾಯ ಮಾಡಿದ, ಚೆನ್ನಪ್ಪ ಹೀರಪ್ಪ ಲಮಾಣಿ(50 ವರ್ಷ), ರೇಕಪ್ಪ ರುಕ್ಲಪ್ಪ ಲಮಾಣಿ (44 ವರ್ಷ) ಹಾಗೂ ಮಾಂತೇಶ (63 ವರ್ಷ) ನಮ್ಮನ್ನು ಅಗಲಿ ಹೋಗಿದ್ದಾರೆ. ಅವರ ಮನೆಯಲ್ಲಿ ಸಾಕಷ್ಟು ಬಡತನವಿದೆ. ಈಗಾಗಲೇ ಮನೆಯವರಿಗೆ ಮಾಹಿತಿ ಕಳಿಸಲಾಗಿದೆ. ಅವರು ಮಂಗಳೂರಿಗೆ ಹೋಗಿ ಅಲ್ಲಿಂದ ಮೃತದೇಹ ತೆಗೆದುಕೊಂಡು ಊರಿಗೆ ಹೋಗುತ್ತಾರೆ. ನಮ್ಮ ಮನೆಯವರು ಕೂಡ ಬರುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ನಮ್ಮೂರಿಗೆ ಕರೆದುಕೊಂಡು ಹೋಗುತ್ತಾರೆ’ ಎಂದು ಗಾಯಾಳು ಎಂಕಪ್ಪ ಕಣ್ಣೀರಿಟ್ಟುಕೊಂಡು ವಿವರಿಸಿದರು