ನ್ಯೂಸ್ ನಾಟೌಟ್: ವಿಶ್ವದಾದ್ಯಂತ ಸಂಭ್ರಮದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಸುಳ್ಯದಲ್ಲಿಯೂ ಯೋಗ ದಿನಾಚರಣೆಯನ್ನು ಬುಧವಾರ ವಿಜೃಂಬಣೆಯಿಂದ ನೆರವೇರಿಸಲಾಯಿತು. ದಕ್ಷಿಣ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಯೋಗ ದಿನಾಚರಣೆ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಯೋಗಾಸನಕ್ಕೆ ಪ್ರಾಮುಖ್ಯತೆ ನೀಡಬೇಕು. ಕನಿಷ್ಟ ಎಂದರೂ 10ರಿಂದ 15 ನಿಮಿಷ ಯೋಗ ಮಾಡಬೇಕು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಪ್ರತಿ ದಿನ ಯೋಗ ಮಾಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ಹೊಸ ಉತ್ಸಾಹ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಡಾ.ಕೆ.ವಿ. ಚಿದಾನಂದ ತಿಳಿಸಿದರು.
ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಚಂದ್ರಾವತಿ, ಪ್ಯಾಥಾಲಜಿ ಮುಖ್ಯಸ್ಥೆ ಸತ್ಯವತಿ ಆಳ್ವ, ಡಾ| ಸತೀಶ್, ಸಿಎಫ್ಒ ಧನಂಜಯ್, ಡಾ|ನಮೃತಾ ಕೆ.ಜಿ, ಡಾ| ಸುಪ್ರೀತಾ ಸೇರಿದಂತೆ ವಿದ್ಯಾರ್ಥಿಗಳು ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ| ಶೃತಿ ರೈ ಸ್ವಾಗತಿಸಿದರು.