ನ್ಯೂಸ್ ನಾಟೌಟ್: ಕೇಂದ್ರೀಯ ಅಬಕಾರಿ ಮತ್ತು ಜಿಎಸ್ ಟಿ ಇಲಾಖೆ ಹೆಚ್ಚುವರಿ ಕಮಿಷನರ್ ಸೇರಿ ಒಂದೇ ಕುಟುಂಬದ ಮೂವರು ಕೇರಳದ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
ಕೇಂದ್ರೀಯ ಅಬಕಾರಿ ಮತ್ತು ಜಿಎಸ್ ಟಿ ಇಲಾಖೆ ಹೆಚ್ಚುವರಿ ಕಮಿಷನರ್ ಮನೀಶ್ ವಿಜಯ್, ತಾಯಿ ಶಕುಂತಲಾ ಮತ್ತು ಸಹೋದರಿ ಶಾಲಿನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಲ್ಕು ದಿನಗಳ ರಜೆ ಕಳೆದರೂ ಮನೀಶ್ ವಿಜಯ್ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅವರ ಸಹೋದ್ಯೋಗಿಗಳು ಅವರ ಮನೆಗೆ ತೆರಳಿದಾಗ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಮೃತದೇಹ ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅವರ ತಾಯಿ ಶಕುಂತಲಾ ಅವರ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಶಕುಂತಲಾ ಅವರ ಮೃತದೇಹದ ಮೇಲೆ ಬಿಳಿ ಬಟ್ಟೆ ಮತ್ತು ಹೂವುಗಳನ್ನು ಹಾಕಲಾಗಿದೆ. ಇದರಿಂದಾಗಿ ಮೊದಲು ತಾಯಿ ಮೃತಪಟ್ಟಿದ್ದು, ಬಳಿಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ತಾಯಿಯನ್ನು ಕೊಲೆ ಮಾಡಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಚ್ಚಿ ಪೊಲೀಸ್ ಕಮಿಷನರ್ ಪುಟ್ಟ ವಿಮಲಾದಿತ್ಯ ಈ ಕುರಿತು ಪ್ರತಿಕ್ರಿಯಿಸಿ, ಮೃತದೇಹದ ಫೊರೆನ್ಸಿಕ್ ಪರೀಕ್ಷೆಯ ನಂತರ ಯಾವಾಗ ಘಟನೆ ನಡೆದಿದೆ ಎಂಬ ಬಗ್ಗೆ ತಿಳಿದು ಬರಲಿದೆ. ಮೃತದೇಹ ಪತ್ತೆಯಾದ ಮನೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಸಹೋದರಿಗೆ ಘಟನೆ ಬಗ್ಗೆ ತಿಳಿಸಬೇಕು ಎಂಬ ಮನವಿಯ ಪತ್ರವೊಂದು ಪತ್ತೆಯಾಗಿದೆ. ಈ ಕುರಿತು ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.