ನ್ಯೂಸ್ ನಾಟೌಟ್:ತಾಯಿಗೆ ಮಕ್ಕಳೇ ಪ್ರಪಂಚ.ಮಕ್ಕಳಿಗಾಗಿ ತಾಯಿ ಯಾವ ತ್ಯಾಗ ಮಾಡಲು ಸಿದ್ಧಳಾಗಿರುತ್ತಾಳೆ. ಆದರೆ ಈ ಘಟನೆ ಅದಕ್ಕೆ ತದ್ವಿರುದ್ಧ ಎಂಬಂತಿದೆ. ತಾಯಿಯೇ ತನ್ನ 4 ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಹಾರಿ ಜೀವ ಬಿಡಲು ಯತ್ನಿಸಿದ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆ ಬಗ್ಗೆ ಕೇಳಿದರೆ ಹೊಟ್ಟೆ ಚುರ್ರೆನ್ನುತ್ತೆ. ಈ ದುರಂತದ ದೃಶ್ಯ ನೋಡಿದ ಸ್ಥಳೀಯರು ತಾಯಿಯನ್ನು ಕಾಪಾಡಿದ್ದಾರೆ. ದುರದೃಷ್ಟವಶಾತ್ 4 ಪುಟ್ಟ, ಪುಟ್ಟ ಮಕ್ಕಳು ಜಲಸಮಾಧಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಕಾಲುವೆ ಬಳಿ ಬಂದ ನಾಲ್ಕು ಮಕ್ಕಳ ತಾಯಿ ಭಾಗ್ಯ ಭಜಂತ್ರಿ ನೀರಿಗೆ ಹಾರಿದ್ದಾರೆ.
ಮೃತ ಮಕ್ಕಳನ್ನು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದವರು ಎಂದು ಗುರುತಿಸಲಾಗಿದೆ. ತನು ನಿಂಗರಾಜ ಭಜಂತಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ ನಿಂಗರಾಜ ಭಜಂತ್ರಿ ಹಾಗೂ ಹುಸೇನ ನಿಂಗರಾಜ ಭಜಂತ್ರಿ (13 ತಿಂಗಳು) ಎಂದು ಗುರುತಿಸಲಾಗಿದೆ.ಮಕ್ಕಳ ಸಮೇತ ಕಾಲುವೆಗೆ ಹಾರಿದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಮೀನುಗಾರರು ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಕೌಟುಂಬಿಕ ಕಾರಣವೇ ಈ ಘಟನೆಗೆ ಕಾರಣ ಎನ್ನಲಾಗಿದೆ.