![](https://newsnotout.com/wp-content/uploads/2024/06/news-9-kvg-sddddddd.jpg)
ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (ಎನ್ ಎಂಸಿ) ನಲ್ಲಿ ವಾರ್ತಾಪತ್ರ ವಿದ್ಯಾಚೇತನ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂಎಂ ವಾರ್ತಾಪತ್ರವನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, “ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ.ಅನುರಾಧಾ ಕುರುಂಜಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಕಛೇರಿ ಅಧೀಕ್ಷಕಿ ನಿವೇದಿತಾ ಎಂ, ಸಂಪಾದಕ ಮಂಡಳಿಯ ಸದಸ್ಯರಾದ ರಂಜಿತಾ ಬಿ ಆರ್, ಹರ್ಷಕಿರಣ ಬಿ , ಕಚೇರಿ ಸಿಬ್ಬಂದಿ ಪವನ್ ಉಪಸ್ಥಿತರಿದ್ದರು.
![](https://newsnotout.com/wp-content/uploads/2024/06/news-9-kvg-sddddddddddd.jpg)
ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜೂ.19ರಂದು ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಂಗಳೂರು ವಲಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ. ಸಿ.ಬಿ.ಆರ್ ನ್ಯಾಶನಲ್ ಕಾಲೇಜು ಆಫ್ ಲಾ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಸುಳ್ಯದ ಹತ್ತು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಹುಡುಗರ ವಿಭಾಗದಲ್ಲಿ ರಕ್ಷಿತ್ ಕುಮಾರ್ ಐ.ಪಿ (200 ಮೀಟರ್ ಓಟದಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ), ವಿಜೇತ್ ರಾಜ್ ಯು.ಎನ್ (100 ಮೀಟರ್ ಓಟದಲ್ಲಿ ತೃತೀಯ, 200 ಮೀಟರ್ ಓಟದಲ್ಲಿ ತೃತೀಯ), ಬ್ರಿಜೇಶ್. ಎಂ. (ಟ್ರಿಪಲ್ ಜಂಪ್ ನಲ್ಲಿ ದ್ವಿತೀಯ), ಗಗನ್ ಕೆ.ಸಿ (800ಮೀಟರ್ ಓಟದಲ್ಲಿ ದ್ವಿತೀಯ), ಹೇಮಂತ್ ಸೋಮಯ್ಯ. ಸಿ.ಜೆ. (5000ಮೀಟರ್ ಓಟದಲ್ಲಿ ತೃತೀಯ,1500ಮೀಟರ್ ಓಟದಲ್ಲಿ ತೃತೀಯ), ಮಹಮ್ಮದ್ ಮುಸ್ತಾಫ (ಡಿಸ್ಕಸ್ ಥ್ರೋ ನಲ್ಲಿ ತೃತೀಯ), ರಕ್ಷಿತ್ ಕುಮಾರ್ ಐ.ಪಿ. ವಿಜೇತ್ ರಾಜ್ ಯು. ಎನ್ , ಬ್ರಿಜೇಶ್. ಎಂ. ಹೇಮಂತ್ ಸೋಮಯ್ಯ. ಸಿ.ಜೆ. ಒಳಗೊಂಡ 4×100 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹುಡುಗಿಯರ ವಿಭಾಗದಲ್ಲಿ ಲಾವಣ್ಯ. ಎನ್ 5000ಮೀಟರ್ ಓಟದಲ್ಲಿ ಪ್ರಥಮ ಹಾಗೂ 1500ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ವನ್ಯಶ್ರೀ ಕೆ. ಹೆಚ್ 100 ಮೀಟರ್ ಓಟದಲ್ಲಿ ಪ್ರಥಮ ಮತ್ತು 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಇವರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ಕ್ರೀಡಾಪಟುಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅಂತರ್ ವಲಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
![](https://newsnotout.com/wp-content/uploads/2024/06/news-9-ypoga-j.jpg)
ನ್ಯೂಸ್ ನಾಟೌಟ್: ಯೋಗ ದಿನಾಚರಣೆಯ ಅಂಗವಾಗಿ ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇವರು ಆಯುಷ್ ಇಲಾಖೆ ದ ಕ ಜಿಲ್ಲೆ ಇವರ ಸಹಯೋಗದಲ್ಲಿ ನಡೆಸಿದ ಯೋಗೋತ್ಸವ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ದ್ವಿ.ತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮೋಕ್ಷ್ ಡಿ ಎಲ್ (ಪ್ರಥಮ ), ಯೋಗ ಪ್ರಾತ್ಯಕ್ಷಿಕೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಜೀವನ್ ಪವಾರ್ (ದ್ವಿತೀಯ ) ಬಹುಮಾನ ಗಳಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
![](https://newsnotout.com/wp-content/uploads/2024/06/news-9-kvg-sddddddddddd-dsfrg.jpg)
ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಕೋಶ ಇದರ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ದಿನಾಚರಣೆಯನ್ನು ಬುಧವಾರ (ಜೂ.26) ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ರುದ್ರಕುಮಾರ್ ವಹಿಸಿಕೊಂಡಿದ್ದರು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಅನ್ನುವ ಜಾಗೃತಿಯನ್ನು ಮೂಡಿಸಲಾಯಿತು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.