ನ್ಯೂಸ್ ನಾಟೌಟ್ : ತಮ್ಮ ಮಕ್ಕಳಿಗೆ ಉತ್ತಮ ಅಂಕ ಸಿಗಬೇಕು ಎಂದು ಪಾಲಕರು ಕನಸು ಕಂಡರೆ , ಶಾಲೆಗೆ ಒಳ್ಳೆಯ ಹೆಸರು ಬರಲೆಂದು ಮಾಲೀಕರು ಬಯಸೋದು ಸಹಜ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವಾಗ ಸಹಜವಾಗಿಯೇ ಈ ಒತ್ತಡ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ . ಅಂತೆಯೇ ನಿನ್ನೆಯಷ್ಟೇ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಬರೆದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ವೈದ್ಯರು ಪರಿಶೀಲನೆ ನಡೆಸಿದಾಗ ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ.
ಹಿಂದೆಲ್ಲ ವಯಸ್ಸಾದವರಿಗೆ ಮಾತ್ರ ಹೃದಯಾಘಾತ ಆಗುತ್ತದೆ ಎನ್ನುತ್ತಿದ್ದರು. ಆದರೆ, ಈಗ ಯಾವುದೇ ವಯಸ್ಸಿನ ಮಿತಿ ಇಲ್ಲದೆ, ಹೃದಯಾಘಾತ ಸಾಮಾನ್ಯವಾಗಿದೆ. ದಿಢೀರನೇ ಸಾಯುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಇದೀಗ ಆಂಧ್ರ ಪ್ರದೇಶದ ವೈಎಸ್ಆರ್ ಜಿಲ್ಲೆಯ ರಾಜುಪಾಲೆಂ ಮಂಡಲದಲ್ಲಿ ದುರಂತವೊಂದು ಸಂಭವಿಸಿದೆ. ಕೊರ್ರಪಾಡುವಿನಲ್ಲಿ 10ನೇ ತರಗತಿ ಓದುತ್ತಿದ್ದ ಲಿಖಿತಾ (15) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ನಿನ್ನೆ ಪರೀಕ್ಷೆಗೆ ಹಾಜರಾಗಿದ್ದ ಬಾಲಕಿ, ಮಧ್ಯಾಹ್ನದ ಊಟದ ನಂತರ ಸಹ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಾಳೆ.
ಆಕೆ ಕುಸಿದ ಬಿದ್ದ ಬೆನ್ನಲ್ಲೇ ಗಾಬರಿಗೊಂಡ ಸಹಪಾಠಿಗಳು ತಕ್ಷಣ ಶಾಲಾ ಸಿಬ್ಬಂದಿಗೆ ತಿಳಿಸಿದ್ದಾರೆ. ಇದಾದ ಕೂಡಲೇ ಶಾಲಾ ಆಡಳಿತ ಮಂಡಳಿ ಲಿಖಿತಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು, ಆಸ್ಪತ್ರೆಗೆ ಬರುವಷ್ಟರಲ್ಲೇ ಲಿಖಿತಾ ಪ್ರಾಣ ಹೋಗಿರುವುದಾಗಿ ದೃಢಪಡಿಸಿದರು.ಮಗಳನ್ನು ಕಳೆದುಕೊಂಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಶಿಕ್ಷಕರು ಮತ್ತು ಸಹಪಾಠಿಗಳು ಲಿಖಿತಾ ಸಾವಿಗೆ ಕಂಬನಿ ಮಿಡಿದಿದ್ದಾರೆ. ಉತ್ತಮ ಶಿಕ್ಷಣ ಪಡೆದರೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಭಾವಿಸಿರುವ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಪಾಲಕರು ಒತ್ತಡ ಹೇರಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.