ನ್ಯೂಸ್ ನಾಟೌಟ್ : ಪ್ರಸಿದ್ಧ ಚಾರಣಗಳಲ್ಲೊಂದಾದ ಕುಮಾರ ಪವರ್ತದಲ್ಲಿ ಟ್ರಕ್ಕಿಂಗ್ಗೆ ನಿರ್ಬಂಧ ಹೇರಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿರುವ ಕಾರಣ ಈ ಕ್ರಮ ಅನಿವಾರ್ಯವಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, “ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿ ಇದೆ.ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಆನ್ಲೈನ್ ದಾಖಲಾತಿ ವ್ಯಾಪ್ತಿಗೆ ತರುತ್ತೇವೆ. ಏಕಾಏಕಿ ಸಾವಿರಾರು ಜನ ಹೋದರೆ ಇಕ್ಕಟ್ಟಾಗಿ ಸಮಸ್ಯೆ ಆಗುತ್ತದೆ. ಕುಮಾರ ಪರ್ವತದಲ್ಲಿ ಅಂದಾಜು 20 ಕಿ.ಮೀ ಚಾರಣ ಇರಬಹುದು. ಇಂಥ ಜಾಗದಲ್ಲಿ ಎಷ್ಟು ಜನ ಹೋಗಬಹುದು ಅಂತ ನೋಡಿ ಆನ್ಲೈನ್ ಮೂಲಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ.ಅಕ್ರಮ ರೆಸಾರ್ಟ್ ಹಾಗೂ ಹೋಮ್ಸ್ಟೇಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಉಳಿಸಲು ಹಾಗೂ ಕಾಡ್ಗಿಚ್ಚು ನಿಯಂತ್ರಣಕ್ಕೆ ಖಾಸಗಿ ಹೆಲಿಕಾಪ್ಟರ್ ಅವಶ್ಯಕತೆ ಇದ್ದರೆ ಬಳಕೆ ಮಾಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.