ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ಏರಿದ ವೈರಲ್ ಜ್ವರ..! ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಆರೋಗ್ಯ ಇಲಾಖೆ ‘ಹೈ ಅಲರ್ಟ್’

ನ್ಯೂಸ್ ನಾಟೌಟ್: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್-1 ವೈರಸ್ (JN.1 Virus) ಅಟ್ಟಹಾಸ ಮುನ್ಸೂಚನೆ ನೀಡಿದೆ. ದೇವರನಾಡಿನಲ್ಲಿ ದಿನೇದಿನೇ ಪ್ರಕರಣ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಸ್ವರ್ಗ, ಸಾರಡ್ಕ, ಜಾಲ್ಸೂರು, ತಲಪಾಡಿ, ಈಶ್ವರಮಂಗಲ ಗಡಿಪ್ರದೇಶದಲ್ಲಿ ಅಲರ್ಟ್ ಗೆ ಸೂಚಿಸಲಾಗಿದೆ. ಇದರ ನಡುವೆ ಹವಾಮಾನ ವೈಪರೀತ್ಯಗಳಿಂದ ವೈರಲ್ ಫಿವರ್ (Viral Fever) ಪ್ರಮಾಣ ದಿಢೀರ್ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಸ್ ಜ್ವರದ ಪ್ರಮಾಣ ಏರಿಕೆಯಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಸುಳ್ಯದಲ್ಲಿ ಹೆಚ್ಚುತ್ತಿರುವ ಜ್ವರದ ವೇಗ

ಜಿಲ್ಲೆಯ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗದಲ್ಲಿ ಜ್ವರದ ಪ್ರಮಾಣ ಅಧಿಕವಾಗಿದೆ. ಖಾಸಗಿ ಕ್ಲಿನಿಕ್​ಗಳಲ್ಲಿ ಕಳೆದ ಒಂದು ವಾರದಿಂದ ಜ್ವರದ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ SARI ಮತ್ತು ILI ಪ್ರಕರಣಗಳ ಬಗ್ಗೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಕಳಿಸಲಾಗಿದೆ ಎಂದು ದಕ್ಷಿಣ ಕನ್ನಡ DHO ಡಾ.ಎಚ್.ಆರ್ ತಿಮ್ಮಯ್ಯ ತಿಳಿಸಿದ್ದಾರೆ.

ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ILI ಮತ್ತು SARI ಪ್ರಕರಣಗಳ ಬಗ್ಗೆ ನಿಗಾ ಇಡಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇವೆ. ತಾಲೂಕು ವೈದ್ಯರುಗಳ ಸಭೆ ಕರೆದು ಸಹ ಸೂಚನೆ ಕೊಟ್ಟಿದ್ದೇವೆ. SARI ಪ್ರಕರಣಗಳೆಲ್ಲವನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ILI ಪ್ರಕರಣಗಳಲ್ಲಿ 20 ರಲ್ಲಿ ಒಂದು ಟೆಸ್ಟ್ ಗೆ ಒಳಪಡಿಸುತ್ತೇವೆ. ರಾಜ್ಯಮಟ್ಟದಲ್ಲಿ ಬರುವ ನಿರ್ದೇಶನವನ್ನು ಪಾಲಿಸುತ್ತೇವೆ. ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಿಲ್ಲೆಗೆ ಬರ್ತಾರೆ. ಎಲ್ಲಾ ವಿದ್ಯಾಸಂಸ್ಥೆಗಳಿಗೂ ಲಿಖಿತವಾಗಿ ತಿಳಿಸುತ್ತೇವೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದ್ರೆ ಅವರನ್ನು ಐಸೋಲೇಟ್ ಮಾಡಬೇಕು. ಅಗತ್ಯ ಬಿದ್ರೆ ಚಿಕಿತ್ಸೆ ನೀಡಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ ಎಂದು ಡಾ.ಎಚ್.ಆರ್ ತಿಮ್ಮಯ್ಯ ಅವರು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

Related posts

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ;ಚಿಕ್ಕಮಗಳೂರು ಬಿಜೆಪಿ ಕಚೇರಿ,ಉಡುಪಿ ಮಠದ ಮೇಲಿತ್ತು ಉಗ್ರರ ಕಣ್ಣು,ಎನ್‌ಐಎಯಿಂದ ಸ್ಪೋಟಕ ಮಾಹಿತಿ

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಜಿಂಕೆ..!ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ,ಮೂವರು ಗಂಭೀರ

ಸುಳ್ಯ: ನಾಗಪಟ್ಟಣದ ಗೆಸ್ಟ್ ಹೌಸ್ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ, 6 ಆನೆಗಳ ಘೀಳಿಗೆ ಭಯಪಟ್ಟ ಜನ