ನ್ಯೂಸ್ ನಾಟೌಟ್: ಗಣೇಶನನ್ನು ಕಾಲ್ಪನಿಕ ದೇವರು, ಪೂಜೆ ಮಾಡುವ ಅಗತ್ಯವಿಲ್ಲ, ಇದೆಲ್ಲ ಸ್ವಾತಂತ್ರ್ಯ ನಂತರ ಬಂದದ್ದು ಎಂದು ಕೆಲ ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಹಿಂದೂ ಪರ ಹೋರಾಟಗಾರ ಪ್ರಶಾಂತ್ ಸಂಬರಗಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಟ್ಯಂತರ ಜನ ಅನುಯಾಯಿಗಳನ್ನು ಹೊಂದಿರುವ ಪಂಡಿತಾರಾಧ್ಯ ಶ್ರೀಗಳು ಸಮಾಜದ ಒಂದು ವರ್ಗವನ್ನು ಓಲೈಸುವ ಭರದಲ್ಲಿ, ದೇಶದ ಬಹುಸಂಖ್ಯಾತರ ಆರಾಧನೆಯ, ನಂಬಿಕೆಯ ಕೇಂದ್ರ ಬಿಂದುವಾಗಿರುವ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಗಣಪತಿ ದೇವರ ಕುರಿತು ಅತ್ಯಂತ ಕೀಳು ಹೇಳಿಕೆ ನೀಡಿದ್ದಾರೆ. ಸರ್ವಧರ್ಮೀಯರು ಪೂಜಿಸುವ ಗಣೇಶನ ಭಕ್ತವರ್ಗದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಅಗ್ರ ಸ್ಥಾನ ಪಡೆದಿರುವ ವಿಘ್ನ ನಿವಾರಕನ ಬಗ್ಗೆ, ಹಾಗೂ ಹಿಂದೂ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿದ್ದು, ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಕುಂದುಂಟಾಗಿದೆ.
ಸಾರ್ವಜನಿಕವಾಗಿ ಹೀಗೆ ಹಿಂದೂ ದೇವರ ವ್ಯಂಗ್ಯದ ಹಿಂದೆ ಸಮಾಜದ ಸಾಮರಸ್ಯಕ್ಕೆ ಹಾಳು ಮಾಡುವ ಕುತಂತ್ರ ಅಡಗಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಗಣೇಶನ ಆರಾಧನೆ, ಆರಾಧಕರ ಆಚಾರ ವಿಚಾರಗಳ ಬಗ್ಗೆ ಸಾಣೇಹಳ್ಳಿ ಸ್ವಾಮೀಜಿಯವರು ಮಾತುಗಳಿಂದ ನಿಂದಿಸಿರುವುದೂ ಅಕ್ಷಮ್ಯ. ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡಿದ್ದು, ಹಿಂದೂಗಳ ಭಾವನೆ ಕೆರಳಿಸಲು ಹೊರಟಿರುವ ಸಾಣೇಹಳ್ಳಿ ಸ್ವಾಮೀಜಿ ವಿರುದ್ಧ 295 ಎ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.