ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಹಲ್ಲೆಗೈದಿರುವ ದೂರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವ್ಯಕ್ತಿಯೊಬ್ಬರ ಜೊತೆ ಕೆಲಸಕ್ಕೆ ಹೋಗಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಶಿವರಾಜ್ ಎಂ.ಬಿ (27) ನೀಡಿರುವ ದೂರಿನ ಪ್ರಕಾರವಾಗಿ ಸೆ.17ರಂದು ಸಂಜೆ ಶಿವರಾಜ್ ಅವರು ಬೆಳ್ಳಾರೆ ಗ್ರಾಮದ ಕೊಳಂಬಳ ಅಕ್ಕಿ ಮಿಲ್ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ನೆಟ್ಟಾರು ಕಡೆಯಿಂದ ಕಾರೊಂದರಲ್ಲಿ ಬಂದ ಆರೋಪಿಗಳಾದ ಹಕೀಂ, ಅತ್ತಾವುಲ್ಲ ,ರಫೀಕ್ ಅಜ್ಜಾವರ ಮತ್ತು ಆಶೀರ್ ಎಂಬವರು ಶಿವರಾಜ್ ರನ್ನು ಅಡ್ಡಗಟ್ಟಿ ಜಮಾಲುದ್ದೀನ್ ಎಂಬವರೊಂದಿಗೆ ಕೆಲಸಕ್ಕೆ ಹೋಗುತ್ತಿರುವ ವಿಚಾರದಲ್ಲಿ ತಕರಾರು ತೆಗೆದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜಾತಿನಿಂದನೆ ಮಾಡಿ ಜೀವಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಶಿವರಾಜ್ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2023 ಕಲಂ 341, 504,323,506, ಜೊತೆಗೆ 34 ಐ ಪಿ ಸಿ ಮತ್ತು ಕಾಲಂ 3(1)(r)(s) prevention of atrocities (Amendment) Act 2015 ಯಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.