ನ್ಯೂಸ್ ನಾಟೌಟ್: ಕಳೆದೆರಡು ವಾರಗಳ ಹಿಂದೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಡಿಕೇರಿ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ.
ಕುದ್ರೆಪಾಯದಲ್ಲಿ ಉಸ್ಮಾನ್ ಅನ್ನುವ ವ್ಯಕ್ತಿಯನ್ನು ಸಹೋದರರೇ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಸ್ಮಾನ್ರನ್ನು ಕೊಲೆಗೈಯ್ಯಲು ಆತನ ಸಹೋದರಾದ ರಫೀಕ್ ಮತ್ತು ಸತ್ತಾರ್ ಬಳಸಲು ಚೂರಿಯನ್ನು ಅರಂತೋಡಿನಲ್ಲಿರುವ ಅವರ ಸಹೋದರ ಮಾಯಿನ್ ಕುಟ್ಟಿಯವರ ಪುತ್ರ ಮುಬಾರಕ್ ಒದಗಿಸಿದ್ದನೆಂದು ಪೊಲೀಸರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಸುಳ್ಯದ ಜೂನಿಯರ್ ಕಾಲೇಜಿನ ಸಮೀಪದ ನಿವಾಸಿ ಮುಬಾರಕ್(37 ವರ್ಷ) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಬೆಂಗಳೂರಿನಲ್ಲಿ ಬೇಕರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ. ಕರೋನಾ ಸಮಯದಲ್ಲಿ ಬೇಕರಿ ಬಂದ್ ಮಾಡಿದ್ದ. ಊರಿಗೆ ಬಂದಿದ್ದ. ಅವನಲ್ಲಿ ಬ್ರೆಡ್ ಕತ್ತರಿಸುವ ಚಾಕು ಇತ್ತು. ಅದನ್ನು ಆತ ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪ ಕೇಳಿದ ಮೇರೆಗೆ ನೀಡಿದ್ದ. ಕೊಲೆ ನಡೆಯುವ ಹಿಂದಿನ ದಿನ ಮುಬಾರಕ್ ಇದನ್ನು ಕೊಟ್ಟಿದ್ದ ಎಂದು ತಿಳಿದು ಬಂದಿದೆ.
ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ಜು.27ರಂದು ಸುಳ್ಯಕ್ಕೆ ಬಂದು ಮುಬಾರಕ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.