ನ್ಯೂಸ್ ನಾಟೌಟ್ : ಯಕ್ಷಧ್ರುವ ಪಟ್ಲ ಫೌಂಡೇಶನ್ – ಮಂಗಳೂರು ಬಹರೈನ್ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ, ಪ್ರಸಂಗ ಮುಹೂರ್ತ ಪೂಜೆ, ಇತ್ತೀಚೆಗೆ ಕನ್ನಡ ಸಂಘ ಬಹರೈನ್ ಸಭಾಂಗಣದಲ್ಲಿ ನೆರವೇರಿತು.
ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭಕೋರಿದರು. ಅರ್ಚಕ ಶ್ರೀಕೃಷ್ಣ ಅಡಿಗ ಕದ್ರಿ, ಸತ್ಯ ಶಂಕರ ಬರೆ ಮಾತನಾಡಿದರು. ಪಟ್ಲ ಸಂಭ್ರಮ 2023 ಮುಂಬರುವ ಅಕ್ಟೋಬರ್ 20ಕ್ಕೆ ಅದ್ದೂರಿಯಾಗಿ ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ. ಈ ವರ್ಷದ ಯಕ್ಷಗಾನ ಅಭ್ಯಾಸಕ್ಕೆ ಪ್ರಸಂಗ ಮುಹೂರ್ತ ನೆರವೇರಿತು. ಬಹರೈನ್ ಸೌದಿಯ ಯಕ್ಷಗಾನ ಕಲಾವಿದರು, ಅತಿಥಿ ಕಲಾವಿದರನ್ನೊಳಗೊಂಡು ಅಭಿನವ ವಾಲ್ಮೀಕಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ನಾಟ್ಯಗುರು ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಪ್ರದರ್ಶನ ನಡೆಯಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಿರಿಕಂಠದ ಭಾಗವತಿಕೆಯೊಂದಿಗೆ ತಾಯ್ನಾಡ ತೆಂಕುಬಡಗಿನ ಸುಪ್ರಸಿದ್ಧ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ , ಖ್ಯಾತ ಹಿರಿಯ ಕಲಾವಿದ ಶೇಖರ್ ಡಿ.ಶೆಟ್ಟಿಗಾರ್ ದುಬೈ, ಹಿಮ್ಮೇಳವಾದಕ ರೋಹಿತ್ ಉಚ್ಚಿಲ ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಪಟ್ಲ ಸಂಭ್ರಮ 2023ರ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡ, ಅತಿಥಿಗಳಾಗಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಘಟಕದ ಅಧ್ಯಕ್ಷ ಪ್ರಾಸ್ತಾವಿಕ ಮಾತಾಡಿದರು. ಗೌರವಾಧ್ಯಕ್ಷ ಸುಭಾಶ್ಚಂದ್ರ, ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ , ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್ ಸೌದಿ ಘಟಕದ ಉಪಾಧ್ಯಕ್ಷ ನರೇಂದ್ರ ಶೆಟ್ಟಿ, ಗೌರವ ಸಲಹೆಗಾರರಾದ ಗೋಪಾಲ್ ಶೆಟ್ಟಿ, ರಾಜ್ ಕುಮಾರ್, ನಾಗೇಶ್ ಶೆಟ್ಟಿ, ದ್ವೀಪದ ಹಿರಿಯ ಕನ್ನಡಿಗರಾದ ಅಬ್ದುಲ್ ರಜಾಕ್, ಆಸ್ಟಿನ್ ಸಂತೋಷ್, ಸತೀಶ್ ಉಳ್ಳಾಲ ಮೊದಲಾದ ಗಣ್ಯರು ಪಟ್ಲ ಸಂಭ್ರಮ 2023 ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ರಾವ್ ಪೇಜಾವರ ಸ್ವಾಗತಿಸಿ ನಿರೂಪಿಸಿದರು. ಜತೆಕಾರ್ಯದರ್ಶಿ ನವೀನ್ ಭಂಡಾರಿ ವಂದಿಸಿದರು.