ನ್ಯೂಸ್ ನಾಟೌಟ್ : ಮೂಡುಬಿದಿರೆಯ ಖ್ಯಾತ ವಕೀಲರಾದ ಅಡ್ವಕೇಟ್ ಚೇತನ್ ಕುಮಾರ್ ಶೆಟ್ಟಿಯವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರಹ ಬಿತ್ತರಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ಸಂದೇಶ:
ಇತ್ತೀಚೆಗೆ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಸ್ವತಃ ಒಂದು ಸಂಘದ ಕಾರ್ಯಕರ್ತರಾದ ಚೇತನ್ ಕುಮಾರ್ ಶೆಟ್ಟಿಯವರು ಅವರ ಜ್ಯೂನಿಯರ್ ವಕೀಲರ ಮೂಲಕ ಗೋಕಳ್ಳರ ಪರವಾಗಿ ನಡೆಸಿದ್ದಾರೆ ಎಂದು ವಾಟ್ಸಾಪ್ ಸಂದೇಶ ಹರಿದಾಡಿತ್ತು. ಆದರೆ ಇದು ಸುಳ್ಳು ಸಂದೇಶವಾಗಿದ್ದು ಈ ಬಗ್ಗೆ ವಕೀಲ ಚೇತನ್ ಕುಮಾರ್ ಶೆಟ್ಟಿಯವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ದಾಖಲು:
ತಾನು 19 ವರ್ಷಗಳಿಂದ ವಕೀಲ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು ನನ್ನ ವಿರುದ್ಧದ ಸುಳ್ಳು ಆರೋಪ ನೋವುಂಟುಮಾಡಿದೆ. ನನ್ನ ವೃತ್ತಿಯನ್ನು ನಿರ್ಭೀತಿಯಿಂದ ನಡೆಸಲು ಭಯವಾಗುತ್ತಿದೆ. ಹೀಗಾಗಿ ನನ್ನ ವಿರುದ್ಧ ಸುಳ್ಳು ಸಂದೇಶ ರವಾನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ. ಸಮಿತ್ ರಾಜ್ ಧರೆಗುಡ್ಡೆ, ರಾಜೇಶ್ ಕೆಲ್ಲಪುತ್ತಿಗೆ, ಸಂದೀಪ್ ಹೆಗ್ಡೆ, ಉದಯ ಕುಮಾರ್, ದಯಾನಂದ ಹೆಗ್ಡೆ, ಸಂದೀಪ್ ಸುವರ್ಣ, ವಿಜಯ ಕೊಡಂಗಲ್ಲು, ಶ್ರೀನಿವಾಸ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಮೂಡುಬಿದಿರೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಕಿರಿಯ ವಕೀಲರು ಸೇರಿದಂತೆ ಚೇತನ್ ಕುಮಾರ್ ಶೆಟ್ಟಿಯವರ ಜತೆಗೆ ಪೊಲೀಸ್ ಠಾಣೆಗೆ ತೆರಳಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.