ನ್ಯೂಸ್ ನಾಟೌಟ್ : ದೇಶದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಪರಿಚಯಿಸಿದ ಕಿಸಾನ್ ಸಮ್ಮಾನ್ ಯೋಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ, ಸಕಾಲದಲ್ಲಿ ರೈತರ ನೆರವಿಗೆ ಬರುವ ಯೋಜನೆಯ ಫಲಾನುಭವಿಗಳು ಕೋಟ್ಯಂತರ ರೈತರಿದ್ದಾರೆ. 2019ರಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇದೀಗ ಯಶಸ್ವಿಯಾಗಿ ಮೂರು ವರ್ಷಗಳ ನಾಗಾಲೋಟವನ್ನು ಕಂಡಿದೆ.
ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿಯಲ್ಲಿ 12ನೇ ಕಂತನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದೀಗ 13ನೇ ಕಂತುಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆಯ ಭಾಗವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಶೀಘ್ರವೇ ತಲಾ 2000 ರೂ ಗಳಂತೆ ಮೂರು ಕಂತುಗಳಿಗೆ ಒಟ್ಟು 6000 ರೂ ಹಣವನ್ನು ನೇರ ಲಾಭ ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಮೂರು ತಿಂಗಳೊಳಗೆ ಕೋಟ್ಯಂತರ ರೈತರಿಗೆ 2 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ, ಇದನ್ನು ರೈತರಿಗೆ ಗೌರವದ ಮೊತ್ತ ಎಂದೂ ಕರೆಯಲಾಗುತ್ತದೆ.
ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 17ರಂದು ಅರ್ಹ ರೈತ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು 12ನೇ ಕಂತಿನ ಹಣವನ್ನು ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಿದ್ದರು. ಈ ಎರಡು ದಿನಗಳ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪಿಎಂ ಕಿಸಾನ್ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆಗಾಗಿ 16,000 ಕೋಟಿ ರೂಪಾಯಿಗಳನ್ನು ವಿತರಿಸಿದ್ದರು. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಳಗೊಳ್ಳುವ ಈ ಕೇಂದ್ರ ಸರಕಾರದ ಯೋಜನೆಯನ್ನು ಸುಮಾರು 3.6 ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.
ಇ-ಕೆವೈಸಿ ಅಪ್ಡೇಟ್ ಕಡ್ಡಾಯ
ಫಲಾನುಭವಿ ರೈತರು ಕೇಂದ್ರ ಯೋಜನೆಯ ಲಾಭವನ್ನು ಪಡೆಯಲು, ಅವರು ಇ-ಕೆವೈಸಿ ಅಪ್ಡೇಟ್ ಮಾಡಬೇಕಾಗಿದೆ ಎಂಬುದನ್ನು ಗಮನಿಸಬೇಕು. ತಮ್ಮ ಖಾತೆಗಳಿಗೆ ಕಂತುಗಳನ್ನು ಪಡೆಯಲು ಅವರು ಕಾಲಕಾಲಕ್ಕೆ ಅದನ್ನು ನವೀಕರಿಸಬೇಕಾಗುತ್ತದೆ. ಪಿಎಂ ಕಿಸಾನ್ ವೆಬ್ಸೈಟ್ ಅಧಿಸೂಚನೆಯ ಪ್ರಕಾರ, ಫಲಾನುಭವಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇ- ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ, ಇಲ್ಲದಿದ್ದರೆ ಅವರು ಯೋಜನೆಯ ಪ್ರಯೋಜನಗಳಿಂದ ವಂಚಿತರಾಗುತ್ತಾರೆ ಎಂದು ತಿಳಿಸಲಾಗಿದೆ.
ಇ-ಕೆವೈಸಿ ಲಿಂಕ್ ಅನ್ನು ಹೇಗೆ ಮಾಡಬಹುದು…?
- ಪ್ರಧಾನಮಂತ್ರಿ ಕಿಸಾನ್ ವೆಬ್ಸೈಟ್ ಭೇಟಿ ನೀಡಿ ಮತ್ತು ರೈತರ ಕಾರ್ನರ್ನಲ್ಲಿರುವ ಕಿಸಾನ್ ಇ-ಕೆವೈಸಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ಬಳಿಕ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ.
- ನೀವು ನಮೂದಿಸಬೇಕಾದ ಕ್ಯಾಪ್ಚಾ ಕೋಡ್ ಕಾಣಿಸಿಕೊಳ್ಳುತ್ತದೆ.
- ನಂತರ ಹುಡುಕಾಟ ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಮೊಬೈಲ್ ಸಂಖ್ಯೆಯನ್ನು ಹಾಕಿದ ನಂತರ, ನಿಮ್ಮ ಮೊಬೈಲ್ ಗೆ OTP ಬರುತ್ತದೆ. OTP ಅನ್ನು ನಮೂದಿಸಿ ಮತ್ತು ದೃಢೀಕರಣಕ್ಕಾಗಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು.
- ಭದ್ರತಾ ಉದ್ದೇಶಕ್ಕಾಗಿ, ಯೋಜನೆಯ ಲಾಭ ಪಡೆಯಲು ಕೇಂದ್ರ ಸರಕಾರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಇ-ಕೆವೈಸಿ ಇಲ್ಲದಿದ್ದರೆ, ಫಲಾನುಭವಿಗಳಿಗೆ ಯೋಜನೆ ಲಭ್ಯವಿರುವುದಿಲ್ಲ.
- ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಇ-ಕೆವೈಸಿ ಮಾಡಲು ರೂ 15 ಶುಲ್ಕವನ್ನು ಪಾವತಿಸಬೇಕಾಗುತ್ತದೆ.