ನ್ಯೂಸ್ ನಾಟೌಟ್: ಇಂದು ಲಾರಿ ಮಾಲೀಕರ ಮಹತ್ವದ ಸಭೆ, ‘ಸಂಪೂರ್ಣ ಲಾರಿ ಬಂದ್’ ತೀರ್ಮಾನ ಸಾಧ್ಯತೆ. ಲಾರಿ ಮುಷ್ಕರದಿಂದಾಗಿ ಪೆಟ್ರೋಲ್, ಡೀಸೆಲ್ ಟ್ಯಾಂಕರ್ಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಹೊರ ರಾಜ್ಯಗಳಿಂದ ತರಕಾರಿ, ಸೊಪ್ಪು ಸೇರಿದಂತೆ ಅನೇಕ ದಿನನಿತ್ಯ ಬಳಕೆ ಪದಾರ್ಥಗಳು ಬರುವುದು ನಿಂತಿದೆ. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಸೇವೆ ನೀಡುತ್ತಿರುವ ಲಾರಿಗಳನ್ನು ಬಂದ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಾರಿ ಮುಷ್ಕರ 3ನೇ ದಿನಕ್ಕೆ ಕಾಲಿರಿಸಿದ್ದು ಜಲ್ಲಿಕಲ್ಲು, ಮರಳು ಸೇರಿದಂತೆ ಇನ್ನಿತರ ವಸ್ತುಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ(ಎ.16) ನಡೆದ ಸಂಧಾನ ಸಭೆ ವಿಫಲವಾಗಿದ್ದರಿಂದ ‘ಸಂಪೂರ್ಣ ಲಾರಿ ಬಂದ್’ ಮಾಡುವ ಬಗ್ಗೆ ಗುರುವಾರ (ಇಂದು) ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ ಆಂಡ್ ಏಜೆಂಟ್ ಅಸೋಸಿಯೇಷನ್ ಪದಾಧಿಕಾರಿಗಳು ಲಾರಿ ಮಾಲೀಕರ ಸಭೆ ಕರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ನಾವು ಹೋರಾಟದಿಂದ ಹಿಂದೆ ಸರಿಯಲ್ಲ. ಆಟೋರಿಕ್ಷಾದಂತೆ ಲಾರಿ ಮಾಲೀಕರಿಗೆ ಬಾಡಿಗೆ ದರ ಫಿಕ್ಸ್ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಒಪ್ಪುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಚಾಮರಾಜ ಪೇಟೆಯ ಪ್ರಕಾಶ್ ಕೆಫೆ ಹೋಟೆಲ್ ನಲ್ಲಿ ಮಧ್ಯಾಹ್ನ 3 ಗಂಟೆ ಲಾರಿಮಾಲೀಕರ ಸಭೆ ಕರೆಯಲಾಗಿದೆ. ಅಲ್ಲಿ ಮುಂದಿನ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ‘ಸಂಪೂರ್ಣ ಲಾರಿ ಬಂದ್’ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.